WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Monday, February 28, 2011

ಎಸ್ ಎಂ ಎಸ್ ಕ್ರಾಂತಿ

 ನೀವು ಮೆಡಿಕಲ್ ಶಾಪ್ ಗೆ ಹೋಗಿ ಔಷಧಿ ಹಾಗೂ ಮಾತ್ರೆ ಕೋಳ್ಳುತ್ತೀರಿ. ಅದು ಅಸಲಿಯೋ ನಕಲಿಯೋ ಕಂಡುಹಿಡಿಯುವುದು ಹೇಗೆ, 'ನಮ್ಮ ಕೈಯಲಂತೂ ಸಾಧ್ಯವೇ ಇಲ್ಲ, ದೇವರ ಮೇಲೆ ಭಾರ ಕೊಳ್ಳುವುದು, ಎಂದು ಹತಾಶೆಯಿಂದ ಮರುಗಬೇಡಿ. ಇನ್ನು ಮುಂದೆ ಕೇವಲ ಒಂದು ಎಸ್ ಎಂ. ಎಸ್. ಮಾಡಿ ನೀವು ಕೊಂಡ ಔಷಧಿ ಅಸಲಿಯೋ, ನಕಲಿಯೋ ತಿಳಿದುಕೊಳ್ಳಬಹುದು.
ಹೌದು, ಕೇಂದ್ರ ಔಷಧ ಸಲಹಾ ಸಮಿತಿ ಔಷಧಗಳ ಮೇಲೆ ವಿಶೇಷ ಕೋಡ್ ನಮೂದಿಸಿ, ಅದರ ಬಗ್ಗೆ ಮಾಹಿತಿ ಒದಗಿಸುವ ಪ್ರಸ್ತಾಪಕ್ಕೆ ಓಕೆ ಎಂದಿದೆ. ಹೀಗಾಗಿ ಈ ಪ್ರಸ್ತಾಪವೀಗ ಔಷದ ತಾಂತ್ರಿಕ ಸಲಹಾ ಮಂಡಳಿ ಮುಂದಿದೆ. ಅಲ್ಲಿಯೂ ಓಕೆಯಾದಲ್ಲಿ ಕೇಂದ್ರ ಆರೋಗ್ಯ ಇಲಾಖೆ ಅಂತಿಮ ಅದೇಶ ಹೊರಡಿಸಲಿದೆ.
ಈ ಆದೇಶ ಹೊರಬಿದ್ದಲ್ಲಿ ನಮ್ಮ ದೇಶದಲ್ಲಿ ಮಾರಲಾಗುವ ಪ್ರತಿಯೊಂದು ಔಷದದ ಮೇಲೂ 2ಡಿ ಬಾರ್ ಕೋಡ್ ಮತ್ತು ಯೂನಿಕ್ ರಾಂಡ್ಯಾಮ್ಲಿ ಜನರೇಟೆಡ್ ನ್ಯೂಮರಿಕ್ ಕೋಡ್ (ಯುಐಡಿ) ನಮೂದಿಸಲಾಗುತ್ತದೆ. ಈ ಬಾರ್ ಕೋಡ್ ನ ಮೇಲೆ ಪೋನ್ ನಂಬರನ್ನೂ ಹಾಕಲಾಗುತ್ತದೆ. ಔಷದಿ ಕೊಳ್ಳುವ ಗ್ರಾಹಕರು ಯುಐಡಿ ನಂಬರನ್ನು ಪೋನ್ ನಂಬರಗೆ ಎಸ್ ಎಂ ಎಸ್ ಮಾಡಿದರೆ ಸಾಕು, ಕೂಡಲೇ ಈ ಔಷದಿ ಅಸಲಿ ಹೌದೋ, ಅಲ್ಲವೋ ಎಂ ಮಾಹಿತಿ ನಿಮ್ಮ ಮೊಬೈಲ್ ಗೆ ಒಂದು ಸೇರುತ್ತದೆ. ಈ ರೀತಿ ಬಾರ್ ಕೋಡ್ ಅಂಟಿಸಲು ಹೆಚ್ಚೇನೂ ಖರ್ಚಾಗುವುದಿಲ್ಲ. ಹೆಚ್ಚೆಂದರೆ 30ಪೈಸೆಯಷ್ಟೆ ಖರ್ಚಾಗುತ್ತದೆಯಂತೆ. ಎಲ್ಲ ಔಷದ ತಯಾರಕರು ಈ ಸಿಸ್ಟಂ ಅಳವಡಿಸಿಕೊಂಡಲ್ಲಿ ಈ ಖರ್ಚು 10 ಪೈಸೆಗಿಳಿಯಲಿದೆ ಎಂದು ಡ್ರಗ್ ಕಂಟ್ರೋಲರ್ ಹೇಳಿದ್ದಾರೆ. ಆದರೆ ಸಣ್ಣ ಔಷಧ ತಯಾರಕರು ಖರ್ಚು ಜಾಸ್ತಿಯಾಗುತ್ತದೆ ಎಂದು ತಗಾದೆ ತೆಗೆದಿದ್ದಾರೆ. ಈ ಸಿಸ್ಟಂ ನಮ್ಮ ದೇಶದಲ್ಲಿಯೇ ಮೊದಲಿಗೆ ಜಾರಿಗೆ ಬರುತ್ತಿಲ್ಲ. ಈಗಾಗಲೇ ಇಟಲಿ, ಮಲೇಷಿಯಾ, ಐರೋಪ್ಯ ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡು ನಕಲಿ ಔಷಧಗಳ ಮಾರಾಟದ ಮೇಲೆ ನಿಯತ್ರಣ ಸಾದಿಸಿವೆ. ನಮ್ಮ ದೇಶದಲ್ಲಿಯೂ ನಕಲಿ ಹಾವಳಿ ಜಾಸ್ತಿಯಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಾರವೇ ಮಾರಾಟವಾಗುತ್ತಿರುವ ಔಷಧಗಳಲ್ಲಿ ಶೇ5.6 ಕಳಪೆ ಗುಣಮಟ್ಟದವು ಮತ್ತು ಶೇ0.26 ನಕಲಿ ಔಷಧಿಗಳು. ಹೀಗಾಗಿ ಈ ಸಿಸ್ಟಂ ಅಳವಡಿಸುವುದು ಅತಿ ಅಗತ್ಯವಾಗಿದೆ. ಆದರೆ ಜಾರಿಗೆ ಬರಲು ಇನ್ನೆಷ್ಟು ದಿನ ಬೇಕೋ ?
ಹೆಚ್ಚಿನ ಮಾಹಿತಿಗೆ: http://www.maya-biotech.com

Thursday, February 24, 2011

ಶೀಘ್ರದಲ್ಲೇ 150 ರೂಪಾಯಿಗಳ ಮೌಲ್ಯದ ನಾಣ್ಯ


150 ರೂಪಾಯಿ ಮೌಲ್ಯದ ನಾಣ್ಯದಂತೆ 5 ರೂಪಾಯಿ ನಾಣ್ಯವನ್ನು ಕೂಡಾ ತಯಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆ ಆರಂಭವಾಗಿ 150 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಸ್ಮರಣಾರ್ಥವಾಗಿ, ಕೇಂದ್ರ ಸರಕಾರ ಮೊದಲ ಬಾರಿಗೆ 150 ರೂಪಾಯಿಗಳ ಮೌಲ್ಯದ ನಾಣ್ಯವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.


ಆದಾಯ ತೆರಿಗೆ ಇಲಾಖೆ (1860-2010) ಆರಂಭವಾಗಿ 150 ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ಬಜೆಟ್ ಭಾಷಣಕ್ಕಿಂತ ಮುಂಚೆ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಸರಕಾರ ಮೊದಲ ಬಾರಿಗೆ 150 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ ಎಂದು ವಿತ್ತಸಚಿವಾಲಯದ ಆಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಸಚಿವಾಲಯ ಅಧಿಕೃತ ಸೂಚನೆಯನ್ನು ಹೊರಡಿಸಿದೆ.
150 ರೂಪಾಯಿ ನಾಣ್ಯವನ್ನು ಬೆಳ್ಳಿ, ತಾಮ್ರ, ಉಕ್ಕು ಮತ್ತು ಸತವುನಿಂದ ತಯಾರಿಸಲಾಗುತ್ತದೆ. ಅಂತಾರಾಷ್ಟ್ರೀಯ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ‘ಸತ್ಯಮೇವ ಜಯತೇ’ ಮತ್ತು ‘ಭಾರತ’ ಹಾಗೂ ಹಿಂಭಾಗದಲ್ಲಿ ‘ಚಾಣಕ್ಯ’ನ ಭಾವಚಿತ್ರ ಮತ್ತು ಜೇನುಹುಳುವಿನೊಂದಿಗಿರುವ ಕಮಲದ ಚಿತ್ರವಿರುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಆರಂಭವಾಗಿ 150 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನೆನಪಿನಂಗವಾಗಿ, ಮೊದಲ ಬಾರಿಗೆ 150 ರೂಪಾಯಿ ಮೌಲ್ಯದ ನಾಣ್ಯವನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Tuesday, February 15, 2011

ಮನೆಮನೆ ಮತಯಾಚನೆ ನಿಷೇಧ. ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ : ಎಸ್.ವೈ.ಖುರೇಷಿ


 
ಚುನಾವಣೆಯ ನಿರ್ಣಾಯಕ ಹಂತವಾದ ಮತದಾನಕ್ಕೂ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಮನೆ-ಮನೆಗೆ ತೆರಳಿ ಮತ ಯಾಚಿಸುವುದೂ ಸೇರಿದಂತೆ ಎಲ್ಲ ಬಗೆಯ ಪ್ರಚಾರವನ್ನೂ ನಿಷೇಧಿಸುವತ್ತ ಕೇಂದ್ರ ಚುನಾವಣಾ ಆಯೋಗ ಹೆಜ್ಜೆಯಿಟ್ಟಿದೆ.
ಕೇಂದ್ರ ಕಾನೂನು ಸಚಿವಾಲಯ ಮತ್ತು ಕೇಂದ್ರ ಚುನಾವಣಾ ಆಯೋಗ ಜಂಟಿಯಾಗಿ ನಗರದ ಐಐಎಸ್‌ಸಿಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ ಕುರಿತ ಪ್ರಾದೇಶಿಕ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಈ ವಿಷಯ ಪ್ರಕಟಿಸಿದರು.
ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಕಾನೂನುಗಳ ಪ್ರಕಾರ ಮತದಾನಕ್ಕೂ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರವನ್ನು ಮಾತ್ರ ನಿಷೇಧಿಸಲಾಗುತ್ತದೆ. ಆದರೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆಮನೆಗೆ ತೆರಳಿ ಮತ ಯಾಚಿಸಲು ಅವಕಾಶ ಇದೆ. ಈ ಅವಧಿಯಲ್ಲಿ ಮತದಾರರಿಗೆ ಹಣ, ವಸ್ತುಗಳು ಮತ್ತು ಮದ್ಯ ವಿತರಿಸಿ ಆಮಿಷ ಒಡ್ಡುತ್ತಿರುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ-ಮನೆ ಪ್ರಚಾರವನ್ನೂ ನಿಷೇಧಿಸಲು ಆಯೋಗ ಯೋಚಿಸಿದೆ.
‘ಮತದಾನಕ್ಕೂ ಮುಂಚಿನ ಅವಧಿಯಲ್ಲಿ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ಮತದಾರರಿಗೆ ಆಮಿಷ ಒಡ್ಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ’ ಎಂದು ಖುರೇಷಿ ಹೇಳಿದರು.
‘ಮತದಾರರು ಯಾವುದೇ ಪೂರ್ವಗ್ರಹ ಇಲ್ಲದೇ ಮತ ಚಲಾಯಿಸುವ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕಾಗಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳಾಗಲೀ, ಅವರ ಬೆಂಬಲಿಗರಾಗಲೀ ಮತದಾರರನ್ನು ಸಂಪರ್ಕಿಸದಂತೆ ನಿಷೇಧ ಹೇರಲು ಚಿಂತನೆ ನಡೆದಿದೆ. ಮತದಾನಕ್ಕೂ ಮುನ್ನ ಮತದಾರರಿಗೆ ಆಮಿಷ ಒಡ್ಡಲು ಅವಕಾಶ ಇಲ್ಲದಿದ್ದರೆ ಮುಕ್ತ ಮತ್ತು ನಿಷ್ಪಕ್ಷಪಾತ ಮತದಾನ ನಡೆಯುತ್ತದೆ’ ಎಂದರು.
‘ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸುವ ಮತ್ತು ಚುನಾವಣೆಯ ದಿನ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ಮೇಲೆ ನಿಗಾ ಇಡುವ ಅಗತ್ಯವಿದೆ. ‘ಕಾಸಿಗಾಗಿ ಸುದ್ದಿ’ ಸಮಸ್ಯೆ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ನಿಷೇಧಿಸಲೇಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಶುದ್ಧೀಕರಣವೇ ಗುರಿ: ತ್ವರಿತಗತಿಯಲ್ಲಿ ಚುನಾವಣಾ ಸುಧಾರಣೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿದ ಖುರೇಷಿ, ‘ರಾಜಕೀಯ ವ್ಯವಸ್ಥೆಯನ್ನು ಅಪರಾಧ ಮುಕ್ತಗೊಳಿಸುವುದೇ ನನ್ನ ಮೊದಲ ಕಾರ್ಯಸೂಚಿ’ ಎಂದರು.
‘ಐದು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸಬಹುದಾದ ಆರೋಪದಡಿ ವಿಚಾರಣೆ ಎದುರಿಸುತ್ತಿರುವವರನ್ನು ಅನರ್ಹಗೊಳಿಸುವ ಸಂಬಂಧ ‘ಪ್ರಜಾಪ್ರತಿನಿಧಿ ಕಾಯ್ದೆ-1951’ರ ಕಲಂ 8ಕ್ಕೆ ತಿದ್ದುಪಡಿ ತರುವಂತೆ ಚುನಾವಣಾ ಆಯೋಗ 2004ರಲ್ಲೇ ಸಲಹೆ ಮಾಡಿತ್ತು. ಈ ಅವಕಾಶ ದುರುಪಯೋಗ ಆಗದಂತೆ ತಡೆಯಲು ಚುನಾವಣೆಗೂ ಆರು ತಿಂಗಳ ಮುನ್ನ ದಾಖಲಾದ ಪ್ರಕರಣಗಳನ್ನು ಮಾತ್ರ ಪರಿಗಣಿಸಬೇಕೆಂಬ ಅಂಶ ತಿದ್ದುಪಡಿಯಲ್ಲಿರಬೇಕು’ ಎಂದು ಪ್ರತಿಪಾದಿಸಿದರು.
ಶೀಘ್ರದಲ್ಲಿ ಕಾಯ್ದೆಗೆ ತಿದ್ದುಪಡಿ: ದೇಶದ ಚುನಾವಣಾ ವ್ಯವಸ್ಥೆಗೆ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗದ ಸಲಹೆ ಪಡೆದು ಚುನಾವಣಾ ಸಂಬಂಧಿ ಕಾಯ್ದೆಗಳಿಗೆ ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ರಾಜಕೀಯ ಪಕ್ಷಗಳು, ಕಾನೂನು ತಜ್ಞರು, ಸರ್ಕಾರೇತರ ಸಂಸ್ಥೆಗಳು, ಶೈಕ್ಷಣಿಕ ವಲಯದ ಪ್ರಮುಖರು ಸೇರಿದಂತೆ ಚುನಾವಣಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರ ಸಲಹೆ ಪಡೆದ ಬಳಿಕ ಚುನಾವಣಾ ಸುಧಾರಣೆ ಪ್ರಸ್ತಾವವನ್ನು ಅಂತಿಮಗೊಳಿಸಲಾಗುವುದು ಎಂದರು.
ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರೂ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸುವುದು ಚುನಾವಣಾ ಸುಧಾರಣೆಯ ಮುಖ್ಯ ಅಂಶ. ಅದರೊಂದಿಗೆ ಚುನಾವಣಾ ವೆಚ್ಚ, ಗಂಭೀರವಲ್ಲದ ರಾಜಕೀಯ ಪಕ್ಷಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು, ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು ಮತ್ತು ವಾಪಸ್ ಪಡೆಯುವುದು, ಆಸ್ತಿ ಮತ್ತು ಬಾಧ್ಯತೆಗಳ ವಿವರ ಪ್ರಕಟ ಮತ್ತಿತರ ಅಂಶಗಳೂ ಈ ಸುಧಾರಣೆಯ ಭಾಗವಾಗಲಿವೆ ಎಂದು ಮೊಯಿಲಿ ಹೇಳಿದರು.
‘ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಸಮಿತಿಯು ಈಗಾಗಲೇ ಐದು ಪ್ರಾದೇಶಿಕ ಸಂವಾದ ಕಾರ್ಯಕ್ರಮಗಳನ್ನು ನಡೆಸಿದ್ದು, ಸಲಹೆಗಳನ್ನು ಸ್ವೀಕರಿಸಿದೆ. ಚುನಾವಣಾ ವ್ಯವಸ್ಥೆಯನ್ನು ಬಲಗೊಳಿಸುವ ಸಂಬಂಧ ಸಲಹೆ ಪಡೆಯಲು ಏಪ್ರಿಲ್ 2 ಮತ್ತು 3ರಂದು ನವದೆಹಲಿಯಲ್ಲಿ ರಾಷ್ಟ್ರಮಟ್ಟದ ಸಭೆ ನಡೆಯಲಿದೆ. ಬಳಿಕ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಚುನಾವಣಾ ಸಂಬಂಧಿ ಕಾಯ್ದೆಗಳಿಗೆ ಸಮಗ್ರ ತಿದ್ದುಪಡಿ ತರಲಾಗುವುದು’ ಎಂದರು.
‘ಚುನಾವಣಾ ಸಂಬಂಧಿ ಕಾಯ್ದೆಗಳಲ್ಲಿ ಇರುವ ಲೋಪಗಳನ್ನು ಗುರುತಿಸಲಾಗಿದೆ. ಅವುಗಳನ್ನು ಸರಿಪಡಿಸುವ ನೀಲಿನಕ್ಷೆಯೂ ಸಿದ್ಧವಿದೆ. ಈಗ ಜನತೆಯ ಅಭಿಪ್ರಾಯವನ್ನು ಪಡೆಯೋಣ. ಸುಧಾರಣೆಯ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಳ್ಳುವ ಜನಾಭಿಪ್ರಾಯವನ್ನು ಸಂಸತ್ತು ತಿರಸ್ಕರಿಸುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಆರು ತಿಂಗಳೊಳಗೆ ಇತ್ಯರ್ಥಗೊಳಿಸಬೇಕಿದೆ. ಇದಕ್ಕಾಗಿ ಕ್ರಿಮಿನಲ್ ನ್ಯಾಯ ಪದ್ಧತಿಯನ್ನು ಶುಚಿಗೊಳಿಸಬೇಕಿದೆ. 2012ರ ಡಿಸೆಂಬರ್ ಬಳಿಕ ನ್ಯಾಯಾಲಯಗಳಲ್ಲಿ ಪ್ರಕರಣಗಳ ಬಾಕಿ ಅವಧಿಯನ್ನು ಮೂರು ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ನ್ಯಾಯಾಂಗದಲ್ಲೂ ಸುಧಾರಣೆ ತರಲಾಗುವುದು ಎಂದರು.

Sunday, February 13, 2011

ಇನ್ಮುಂದೆ ಟ್ರಾಫಿಕ್ ಚಿಂತೆ ಯಾಕೆ…? ವರ್ಷಾಂತ್ಯಕ್ಕೆ “ಹಾರುವ ಕಾರು”.. ಮಾರುಕಟ್ಟೆಗೆ



ಟ್ರಾಫಿಕ್ ಜಾಮ್‌ನಿಂದ ಬೇಸರಗೊಂಡಿರುವಿರಾ? ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ.ಅಮೆರಿಕದ ಬೊಸ್ಟೊನ್ ಮೂಲದ ಟೆರ್ರಾಫ್ಯೂಗಿಯಾ ಟ್ರಾನ್ಸಿಶನ್ ಕಂಪೆನಿ ‘ಹಾರುವ ಕಾರು’(ಟ್ರಾನ್ಸಿಶನ್ ರೊಡೆಬಲ್ ಲೈಟ್ ಸ್ಪೋರ್ಟ್ ಏರ್‌ಕ್ರಾಫ್ಟ್) ಉತ್ಪಾದನೆಯನ್ನು ಆರಂಭಿಸಿದ್ದು. ಕೇವಲ 30 ಸೆಕೆಂಡ್‌ಗಳ ಸಮಯದೊಳಗೆ ಕಾರು ವಿಮಾನವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿಕೆ ನೀಡಿದೆ. 
‘ಹಾರುವ ಕಾರು’ ಆಕಾಶದಲ್ಲಿ ಪ್ರತಿ ಗಂಟೆಗೆ 185 ಕಿ.ಮೀ ವೇಗದಲ್ಲಿ ಹಾರಲಿದೆ. ಹಾಗೂ ರಸ್ತೆಯ ಮೇಲೆ ಪ್ರತಿ ಗಂಟೆಗೆ 105 ಕಿ.ಮೀ ದೂರವನ್ನು ಕ್ರಮಿಸಲಿದೆ.ಕಾರಿಗೆ ಸಾಮಾನ್ಯ ಪೆಟ್ರೋಲ್ ಪಂಪ್‌ನಲ್ಲಿ ಇಂಧನವನ್ನು ತುಂಬಿಕೊಳ್ಳಬಹುದಾಗಿದೆ ಎಂದು ಸಂಡೇ ಎಕ್ಸ್‌ಪ್ರೆಸ್ ವರದಿ ಮಾಡಿದೆ.
‘ಹಾರುವ ಕಾರು’ ಪ್ರಸಕ್ತ ವರ್ಷದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಹಾರುವ ಕಾರಿನ ದರ ಅಂದಾಜು ಕನಿಷ್ಠ 92,39,850 ರೂಪಾಯಿಗಳಿಂದ ಗರಿಷ್ಠ 1,18,40,000 ರೂಪಾಯಿಗಳವರೆಗೆ ನಿಗದಿಪಡಿಸುವ ಸಾಧ್ಯತೆಗಳಿವೆ ಎಂದು 
ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. 
ಟೆರ್ರಾಫ್ಯೂಗಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರಿಚರ್ಡ್ ಗೆರ್ಶ್ ಮಾತನಾಡಿ, ವಾರ್ಷಿಕವಾಗಿ 200 ಹಾರುವ ಕಾರುಗಳ ಮಾರಾಟದ ಗುರಿಯನ್ನು ಹೊಂದಲಾಗಿದೆ. ವಿಮಾನದಂತೆ ‘ಹಾರುವ ಕಾರಿನಲ್ಲಿ’ 400 ದಿಂದ 450 ಮೈಲುಗಳವರೆಗೆ ಹಾರಾಟ ನಡೆಸಬಹುದಾಗಿದೆ. ಈಗಾಗಲೇ 100 ಕಾರುಗಳಿಗೆ ಬೇಡಿಕೆ ಬಂದಿದೆ. ಕೆಲ ಬದಲಾವಣೆಗಳನ್ನು ಮಾಡುವ ಅಗತ್ಯವಿದ್ದು, ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ ಎಂದು ಹೇಳಿದ್ದಾರೆ.
ಹಾರುವ ಕಾರಿನ ಸಾಮರ್ಥ್ಯವನ್ನು ಯಶಸ್ವಿಯಾಗಿ ಸಂಶೋಧನೆಗೊಳಪಡಿಸಲಾಗಿದ್ದು, 28 ಬಾರಿ ಹಾರಾಟದ ಪರೀಕ್ಷೆ ನಡೆಸಲಾಗಿದೆ ಎಂದು ಕಂಪೆನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

Saturday, February 12, 2011

ಅಂತರ್ಜಾಲ ದಿನ ಪತ್ರಿಕೆಗಳು








 














ಪಡಿತರ ಚೀಟಿ ವಿವರವನ್ನು ಅಂತರ್ಜಾಲ ಮೂಲಕವೇ ಸಲ್ಲಿಸಲು

ಪಡಿತರ ಚೀಟಿ ವಿವರವನ್ನು ಅಂತರ್ಜಾಲ ಮೂಲಕವೇ ಸಲ್ಲಿಸಲು ಬೆಂಗಳೂರಿನ ಗ್ರಾಹಕರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.ಸಲ್ಲಿಸಬೇಕಾದ ಚೀಟಿ,ವಿದ್ಯುತ್ ಬಿಲ್ ಮತ್ತು ಅನಿಲ ಸಂಪರ್ಕದ ವಿವರವನ್ನು ಸ್ಕ್ಯಾನ್ ಮಾಡಿ,ಆನ್‌ಲೈನಿನಲ್ಲೇ ಸಲ್ಲಿಸಲು ಅವಕಾಶವಿದೆ.ನೌಕರಿಯಲ್ಲಿರುವವರು,ರಜೆ ಹಾಕಿ ಅಂಗಡಿಗೆ ಮುಖತ: ಭೇಟಿ ನೀಡುವುದನ್ನು ತಪ್ಪಿಸುವ ಸ್ತುತ್ಯರ್ಹ ಪ್ರಯತ್ನವಿದು.ವೆಬ್ ವಿಳಾಸ:http://web5.kar.nic.in/fcslpg/main.aspx

Friday, February 11, 2011

ವಿಶ್ವಕಂಡ ಮಹಾನ್ ಸೈಂಟಿಸ್ಟ್ ತೊಮಸ್ ಆಲ್ವ ಎಡಿಸನ್ ರ 164ನೇ ಜನ್ಮ ದಿನಾಚಾರಣೆ

 

ಇಂದು ವಿಶ್ವಕಂಡ ಅತಿ ಶ್ರೇಷ್ಟ ಸಂಶೋದಕ scintist ತೊಮಸ್ ಅಲ್ವ ಎಡಿಸನ್ ರ 164ನೇ ಹುಟ್ಟು ಹಬ್ಬ ಅಚೆರಿಸುತ್ತಿದೆ. February 11, 1847 ರಲ್ಲಿ ಅಮೆರಿಕದ ಪುಟ್ಟ ನಗರವಾದ ಮಿಲನ್, ಒಹಿಯೊ ರಲ್ಲಿ ಜನಿಸಿದ ಈ ಮಹಾನ್ ಸಂಶೋದಕರದ ಇಂದು ನಾವೆಲ್ಲರು ಉಪಯೋಗಿಸುವ ಬೆಳಕು ಬೀರುವ ಬಲ್ಪ್ ನ್ನು ಕಂಡು ಹಿಡಿದ ಮಾಹಾನ್ ಸೈಂಟಿಸ್ಟ್. ತನ್ನ 84ನೇ ಪ್ರಾಯದಲ್ಲಿ October 18, 1931 ರಂದು ವಿಧಿವಶರಾದರು.

Wednesday, February 9, 2011

ಇದಪ್ಪಾ ಕ್ರಿಯೇಟಿವ್…!

ಇತ್ತೀಚೆಗೆ ಜಾಹೀರಾತು ಪ್ರಪಂಚ ಬೃಹತ್ತಾಗಿ ಹಬ್ಬಿದೆ. ಅದೂ ಕೂಡ ಒಂದು ಉದ್ಯಮವಾಗಿ ಬೆಳೆದಿದೆ, ಬೆಳೆಯುತ್ತಿದೆ. ಸದಾ ಕ್ರಿಯಾಶೀಲವಾಗಿ ಯೋಚಿಸುವವನು ಈ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ವಿಭಿನ್ನವಾಗಿ ಯೋಚಿಸದೇ ಸದಾ ಒಂದೇ ರೀತಿ ಕೆಲಸ ಮಾಡುವವನಿಗೆ ಬೇಡಿಕೆಯೂ ಕಡಿಮೆ, ಫ್ಯೂಚರ್ ಕೂಡ ಇರುವುದಿಲ್ಲ.
ಈ ಕೆಳಗಿನ ಚಿತ್ರಗಳನ್ನು ನೋಡಿ ಕ್ರಿಯೇಟಿವ್ ಎಂಬ ಪದಕ್ಕೆ ಅರ್ಥ ಬರುತ್ತದೆ.


ಜನಗಣತಿಗೆ ಮಾಹಿತಿ ನೀಡಿ ಸಹಕರಿಸಿ

ಇದೇ 9ರಿಂದ 28ರವರೆಗೆ ನಡೆಯುವ 2011ರ ಜನಗಣತಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೇಶದಲ್ಲಿ ನಡೆಯುತ್ತಿರುವ ಏಳನೇ ಜನಗಣತಿ ಇದಾಗಿದ್ದು, ಮನೆ ಗಣತಿ ನಂತರ ಜನಗಣತಿ ಕೈಗೆತ್ತಿಕೊಳ್ಳಲಾಗುತ್ತಿದೆ. 20 ದಿನಗಳ ಕಾಲ ನಡೆಯುವ ಜನಗಣತಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಗಣತಿದಾರರು ಮನೆಗೆ ಬಂದಾಗ ಅವರು ಕೇಳುವ 29 ಪ್ರಶ್ನೆಗಳಿಗೆ ಉತ್ತರ ನೀಡಬೇಕು.ಮುಗಿದಿರುವ ಮನೆ ಗಣತಿಯ ಮಾಹಿತಿಯನ್ನು ಸದ್ಯದಲ್ಲೇ ಪ್ರಕಟಿಸಲಾಗವುದು. ಜನಗಣತಿಯ ತಾತ್ಕಾಲಿಕ ಪಟ್ಟಿಯನ್ನು ಮಾರ್ಚ್ ಕೊನೆ ವಾರದಲ್ಲಿ ಪ್ರಕಟಿಸಲಾಗುವುದು.
ಅತ್ಯಂತ ದೊಡ್ಡದಾದ ಆಡಳಿತಾತ್ಮಕ ಚಟುವಟಿಕೆ ಎಂದು ಹೇಳಲಾದ ಈ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.
ರಾಜ್ಯದ 176 ತಾಲ್ಲೂಕು, 220 ಪಟ್ಟಣ, 127 ಜನಗಣತಿ ಪಟ್ಟಣ, 22 ನಗರ ಸಮೂಹಗಳು, 29,340 ಗ್ರಾಮಗಳಲ್ಲಿ ಜನಗಣತಿ ನಡೆಸಲಾಗುತ್ತದೆ. ಇವುಗಳನ್ನು 1,26,519 ಜನಸಂಖ್ಯಾ ಗಣತಿ ಬ್ಲಾಕುಗಳನ್ನಾಗಿ ವಿಂಗಡಿಸಲಾಗಿದೆ. ಒಟ್ಟು 1,03,523 ಮಂದಿ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. 17,254 ಮಂದಿ ಮೇಲ್ವಿಚಾರಕರು ಮತ್ತು 2,297 ಮಂದಿ ಪರಿಣತರಾದ ತರಬೇತುದಾರರು ನೋಡಿಕೊಳ್ಳಲಿದ್ದಾರೆ.
ಜನಗಣತಿ ಮುಗಿದ ನಂತರ ಅಂದರೆ, ಫೆ.28ರ ರಾತ್ರಿ ವಸತಿ ರಹಿತರ ಗಣತಿಯನ್ನು ಮಾಡಲಾಗುವುದು. ಇದರ ನಂತರ ಮಾರ್ಚ್ 1ರಿಂದ 5ರವರೆಗೆ ಪುನರ್ ಸಂದರ್ಶನ ಸುತ್ತನ್ನು ಕೈಗೊಳ್ಳಲಾಗುವುದು. ಇದರ ನಡುವೆ ಅಲ್ಲಲ್ಲಿ ತಪಾಸಣೆ ಮಾಡಲಾಗುತ್ತದೆ. ಮಾಹಿತಿ ದೋಷ ಇದ್ದರೂ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ.
ಪ್ರತಿಯೊಂದು ಅರ್ಜಿಗೂ ಬಾರ್‌ಕೋಡ್ ನೀಡಿದ್ದು, ಅದರಿಂದ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಆಧುನಿಕ ತಂತ್ರಜ್ಞಾನ ಬಳಸುತ್ತಿರುವುದರಿಂದ ಜನಗಣತಿಯ ಮಾಹಿತಿಯನ್ನು ಮನೆ ಗಣತಿ ಜತೆಗೆ ಸೇರಿಸಬಹುದಾಗಿದೆ. ಎಲ್ಲ ಪಟ್ಟಣಗಳಲ್ಲಿನ ಕೊಳೆಗೇರಿ ಪ್ರದೇಶಗಳಿಗೆ ಪ್ರತ್ಯೇಕವಾದ ಗಣತಿ ಬ್ಲಾಕುಗಳನ್ನು ರಚಿಸಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಗಣತಿ ಬ್ಲಾಕ್‌ಗಳಿಗೆ ಜಿ.ಐ.ಎಸ್ ಆಧಾರಿತ ನಕ್ಷೆಗಳನ್ನು ನೀಡಲಾಗಿದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಿಗೆ ಗ್ರಾಮದ ನಕ್ಷೆಗಳನ್ನು ನೀಡಲಾಗಿದೆ.
ಇದೇ ಮೊದಲ ಬಾರಿಗೆ ಸ್ತ್ರೀ-ಪುರುಷ ಲಿಂಗಗಳ ಜತೆಗೆ ಮೂರನೆ ಲಿಂಗವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಗೋಪ್ಯ: ಜನಗಣತಿ ಸಂದರ್ಭದಲ್ಲಿ ನೀಡುವ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು. ಅಂಕಿಸಂಖ್ಯೆಗಳನ್ನು ಮಾತ್ರ ತೆಗೆದುಕೊಂಡು, ಉಳಿದ ವೈಯಕ್ತಿಕ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.
ಮಾಹಿತಿ ಸಂಗ್ರಹಿಸುವ ಕೆಲಸವನ್ನು ಈ ಸಲವೂ ಹೆಚ್ಚಾಗಿ ಶಿಕ್ಷಕರೇ ಮಾಡಲಿದ್ದಾರೆ. ಅರ್ಧ ದಿನ ಜನಗಣತಿ, ಉಳಿದ ಅರ್ಧ ದಿನ ಶಾಲೆಗಳಿಗೆ ಹೋಗಲು ಸೂಚಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ.
ಸಹಾಯವಾಣಿ : ಜನಗಣತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಶುಲ್ಕ ರಹಿತ ಸಹಾಯವಾಣಿ ಸ್ಥಾಪಿಸಲಾಗಿದೆ.
                      ಅದರ ಸಂಖ್ಯೆ 1800 345 011.
ವೆಬ್‌ಸೈಟ್ ವಿಳಾಸ-  www.censuskarnataka.gov.in

Tuesday, February 1, 2011

ಕುವೆಂಪು ತಂತ್ರಾಂಶ ಹೊಸ ಆವೃತ್ತಿ ಬಿಡುಗಡೆ

ಹಂಪಿ ಕನ್ನಡ ವಿವಿ ಸಿದ್ಧಗೊಳಿಸಿರುವ ಕುವೆಂಪು ಕನ್ನಡ ತಂತ್ರಾಂಶದ ಹೊಸ ಆವೃತ್ತಿ ಫೆ.2ರಂದು ಬಿಡುಗಡೆಯಾಗಲಿದೆ. ವಿಶಿಷ್ಟ ವಿನ್ಯಾಸದ ಬದಲಾವಣೆಗಳೊಂದಿಗೆ ಸುಧಾರಿತ ಆವೃತ್ತಿ 2.0 ತಂತ್ರಾಂಶ ವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವಿ ಕುಲಪತಿ ಡಾ. ಎ. ಮುರಿಗೆಪ್ಪ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

2ನೇ ಆವೃತ್ತಿಯ ತಂತ್ರಾಂಶದಲ್ಲಿ ಮೊದಲ ಆವೃತ್ತಿಯ ಎಲ್ಲಾ ಅಂಶಗಳ ಜತೆಗೆ ನೂತನವಾಗಿ 3 ಬಗೆಯ ಪರಿವರ್ತಕಗಳು ಮತ್ತು 1 ಬಗೆಯ ಕೀಲಿಮಣೆ ವಿನ್ಯಾಸ, ಸೋನಾಟಾ ಸಾಫ್ಟ್ ವೇರ್ ಕಂಪೆನಿ ಸಹಕಾರದಿಂದ ಪ್ರಕಾಶಕ್ ತಂತ್ರಾಂಶದ ಪ್ರಜಾ ಅಕ್ಷರ ವಿನ್ಯಾಸಗಳಲ್ಲಿ ಆಯ್ದ 4 ಮಾದರಿಗಳನ್ನು ಅಳವಡಿಸಲಾಗಿದೆ.

ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1: ಅನು, ಎಸ್ ಆರ್ ಜಿ ಹಾಗೂ ಶ್ರೀಲಿಪಿ ಫಾಂಟ್ ಗಳನ್ನು ಬೆಂಬಿಲಿಸುವುದರ ಜೊತೆಗೆ ನಾಲ್ಕು ಬಗೆ ಕೀಲಿಮಣೆ ವಿನ್ಯಾಸ ಹಾಗೂ ನಾಲ್ಕು ಟೆಕ್ಸ್ ಪರಿವರ್ತಕಗಳನ್ನು ಹೊಂದಿದೆ. ANSI ಮಾದರಿ ಫಾಂಟ್ ಮಾತ್ರ ಬಳಕೆಯಾಗುತ್ತಿದ್ದು, ಪತ್ರಿಕಾ ವಿನ್ಯಾಸಗಾರರನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಶೈಲಿಯ ಫಾಂಟ್ ಗಳನ್ನು ರೂಪಿಸಲಾಗಿದೆ. ಆದರೆ, ಇದು ಹೆಚ್ಚು ಕಡೆ ಇನ್ನೂ ಬಳಕೆಯಾಗುತ್ತಿಲ್ಲ. ವಿಧಾನ ಪರಿಷತ್ ಸದಸ್ಯರಾಗಿದ್ದ ಚಂದ್ರಶೇಖರ ಕಂಬಾರರು ತಂತ್ರಾಂಶ ಯೋಜನೆಗೆ 6 ಲಕ್ಷ ರೂ. ಬಿಡುಗಡೆ ಮಾಡಿದ್ದರು. ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅನುಭವ, ಆಶಯದೊಂದಿಗೆ ತಂತ್ರಾಂಶ ರಚಿಸಲಾಗಿತ್ತು.

ಯಾರಿಗೆ ಉಪಯೋಗ: ಕನ್ನಡ ಬೆರಳಚ್ಚುಗಾರರು, ಡಿಟಿಪಿ ಆಪರೇಟರ್ ಗಳು, ವಿನ್ಯಾಸಗಾರರು, ಸರ್ಕಾರಿ ಕಚೇರಿಗಳಲ್ಲಿ ಬಳಸಬಹುದು. ಸದ್ಯದಲ್ಲೇ ಕುವೆಂಪು ತಂತ್ರಾಂಶದ ಯೂನಿಕೋಡ್ ಆವೃತ್ತಿ ಹೊರ ಬೀಳಲಿದ್ದು ಅಂತರ್ಜಾಲದಲ್ಲಿ ವಿಹರಿಸುವವರು, ಚಾಟ್ ಮಾಡುವವರು, ಪತ್ರ ಬರೆಯುವವರು ಎಲ್ಲರಿಗೂ ಅನುಕೂಲವಾಗಲಿದೆ.

ಮಾಹಿತಿ ಕಣಜವಾಗಲಿದೆ: ತಂತ್ರಾಂಶದೊಂದಿಗೆ ಕನ್ನಡ ಕಾರ್ಪಸ್ ನಿರ್ಮಾಣ ಯೋಜನೆ ಮಾಡಲಾಗುವುದು. ಇದರಿಂದ ಕನ್ನಡ ಇ-ನಿಘಂಟು(ಸುಮಾರು 1 ಕೋಟಿ ಪದ ಸಂಗ್ರಹ), ಸಮಗ್ರ ಕನ್ನಡ ವ್ಯಾಕರಣ ರಚನೆ ಇತ್ಯಾದಿಗಳನ್ನು ನಿರ್ಮಿಸಲಾಗುವುದು. ಆನ್‌ಲೈನ್ ಡಿಕ್ಷ್‌ನರಿ, ಕನ್ನಡ ಒಸಿಆರ್ ತಂತ್ರಾಂಶ, ಸಂಭಾಷಣೆಯನ್ನು ಶಬ್ದರೂಪದಲ್ಲಿ ಪರಿವರ್ತಿಸುವ ತಂತ್ರಾಂಶ, ಸ್ಪೆಲ್ಲಿಂಗ್ ಚೆಕ್ ಭಾಷಾಂತರ ದತ್ತ ಕಣಜ, ಸಂಶೋಧನಾ ಕರ್ನಾಟಕ, ವಿದ್ಯಾರ್ಥಿ ಗಳಿಗೆ ಬೋಧನೆ ಮತ್ತು ತರಬೇತಿ, ವೆಬ್‌ಸೈಟ್ ಮರುವಿನ್ಯಾಸ, ಡಿಜಿಟಲ್ ಸ್ಟುಡಿಯೊ, ಲೈಬ್ರರಿ, ಲ್ಯಾಂಗ್ವೇಜ್ ಲರ್ನರ್, ಆಡಿಯೊ-ವೀಡಿಯೊ ರೆಕಾರ್ಡಿಂಗ್ ಲ್ಯಾಬ್ ಸೇರಿದಂತೆ ಹಲವು ಯೋಜನೆ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮುರಿಗೆಪ್ಪ ಹೇಳಿದರು.

ಈ ತಂತ್ರಾಂಶ ಉಚಿತವೇ: ಹೌದು, ಹಂಪಿ ವಿಶ್ವವಿದ್ಯಾಲಯ ಹೊರ ತರುತ್ತಿರುವ ಈ ತಂತ್ರಾಂಶ ವಿಶ್ವವಿದ್ಯಾಲಯದ ವೆಬ್ ತಾಣದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ. ಆದರೆ, ಈ ತಂತ್ರಾಂಶವನ್ನು ಓಪನ್ ಸೋರ್ಸ್ ಆಗಿ ನೀಡುತ್ತಾರೆಯೇ? ಅಥವಾ ಈ ಹಿಂದಿನಂತೆ source on demand ಎಂದು ಹೇಳುತ್ತಾರೋ ಎಂದು ಕಾದು ನೋಡಬೇಕಿದೆ.