WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Sunday, January 13, 2013

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾಲತಾಣ

 "ವಿದ್ಯಾರಣ್ಯ" ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ.
ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ 'ಅಕ್ಷರ'ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. "ಕ್ರಿಯಾಶಕ್ತಿ'' ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. 'ಭುವನ ವಿಜಯ'. ವಿವಿಧ ನಿಕಾಯಗಳ ವಿವಿಧ ವಿಭಾಗಗಳು 'ತ್ರಿಪದಿ', 'ಕೂಡಲಸಂಗಮ', 'ತುಂಗಭದ್ರ', 'ಘಟಿಕಾಲಯ', 'ಕೇಶೀರಾಜ', 'ಹರಿಹರ', 'ನಾಗವರ್ಮ', 'ಅಕ್ಕ', 'ಅಲ್ಲಮ', 'ನಾದಲೀಲೆ', 'ಕಂಠಪತ್ರ', 'ಜಕ್ಕಣ ಮಂಟಪ' ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. "ಸಿರಿಗನ್ನಡ'' ಸಂಶೋಧನಾ ಗ್ರಂಥಾಲಯ "ಸರ್ವಜ್ಞ" ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು 'ಗಿರಿಸೀಮೆ'. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ 'ನವರಂಗ' ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ. ಪ್ರಸಾರಾಂಗ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದ್ದು ಬಸವಣ್ಣನವರ 'ಅಂತರಂಗ-ಬಹಿರಂಗ' ಸೌಂದರ್ಯದ ಸಮನ್ವಯ ಇಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಉದ್ದೇಶ ಸಾಧಿಸಲು ಆಡಳಿತ ವಿನ್ಯಾಸ, ಶಿಕ್ಷಣ ವಿನ್ಯಾಸ ಮತ್ತು ಪೂರಕ ವಿನ್ಯಾಸಗಳೆಂಬ ತ್ರಿಮುಖ ವಿನ್ಯಾಸಗಳನ್ನು ರೂಪಿಸಲಾಗಿದೆ. ಮತ್ತಷ್ಟು ಮಾಹಿತಿ ಹೆಕ್ಕಲು  ಅಂತರ ಜಾಲತಾಣ ಕೊಂಡಿ: www.kannadauniversity.org

ಹಾಗೆಯೇ  ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ನೆನಪಿಗಾಗಿ ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 2.0 ನ್ನು  ಪಡೆಯಲು>
ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 2.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 13.7 MB Updated Date : 04.02.2011 )
ಯೂನಿಕೋಡ್ ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 8.85 MB Updated Date : 04.02.2011 )
ಕುವೆಂಪು ಕನ್ನಡ ತಂತ್ರಾಂಶ ಎನ್.ಟಿ. ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 3.93 MB Updated Date : 04.02.2011)

Monday, January 7, 2013

ಮಹಿಳೆಯ ರಕ್ಷಣೆಗೆ "ಫೈಟ್‌ಬ್ಯಾಕ್‌" ತಂತ್ರಾಂಶ

ಮಹಿಳೆಯರಿಗೆ ಒಂದು ಶುಭಸುದ್ಧಿ!
ಇತ್ತೀಚೆಗೆ ದೆಹಲಿ ಗ್ಯಾಂಗ್‌ ರೇಪ್‌ ನಡೆದ ಬಳಿಕ ಟೆಕ್‌ ಮಹೀಂದ್ರಾ ಉಚಿತವಾದ "ಫೈಟ್‌ಬ್ಯಾಕ್‌" ತಂತ್ರಾಂಶವನ್ನು ನೀಡುತ್ತಿದೆ.
ನಗರದಲ್ಲಿ ಸಂಚರಿಸುವ ಮಹಿಳೆಯರ ರಕ್ಷಣೆಗಾಗಿ ಟೆಕ್‌ ಮಹೀಂದ್ರಾ ಒಂದು "ಫೈಟ್‌ಬ್ಯಾಕ್‌" ತಂತ್ರಾಂಶ ತಯಾರಿಸಿದೆ. ಈ ಅಪ್ಲಿಕೇಶನ್‌ ಮುಖಾಂತರ ತೊಂದರೆಯಲ್ಲಿರುವ ವ್ಯಕ್ತಿ ಒಂದು ಒಂದು  ಬಟನ್‌ ಒತ್ತಿದರೆ ಮಾಡಿದ್ರೆ ಸಾಕು ತೊಂದರೆಯಲ್ಲಿದ್ದರೆ ಆ ವ್ಯಕ್ತಿಯ ಸ್ಥಳವನ್ನು ಪತ್ತೆಹಚ್ಚಬಹುದು. ಈ ತಂತ್ರಾಂಶ ನಿಮ್ಮ ಸ್ಥಳವನ್ನು ಜಿಪಿಎಸ್‌ ಮುಖಾಂತರ ಪತ್ತೆಹಚ್ಚಿ ಆಪ್ತರಿಗೆ ಸಂದೇಶ ಕಳುಹಿಸುತ್ತದೆ.
ನೀವು ಫೈಟ್‌ ಬ್ಯಾಕ್‌ ಜಾಲತಾಣಕ್ಕೆ  ಭೇಟಿ ನೀಡಿ  ಸೇರಿದರೆ ಸಾಕು. ಸೇರಿದ ನಂತರ ನಿಮ್ಮ ಐದು ಜನ ಆಪ್ತರ ಸಂಚಾರಿ  ಸಂಖ್ಯೆ ಮತ್ತು ಮಿಂಚಂಚೆಯನ್ನು ಇದರಲ್ಲಿ ನಮೂದಿಸಬೇಕು. ಒಂದು ವೇಳೆ ನೀವು ಫೇಸ್‌ಬುಕ್‌ ಲಾಗಿನ್‌ ಆದ್ರೆ ನೀವು ತೊಂದರೆಯಲ್ಲಿದ್ದಾಗ ಈ ಅಪ್ಲಿಕೇಶನ್‌ ಬಳಸಿದರೆ ನಿಮ್ಮ ಫೇಸ್‌ಬುಕ್‌ನಲ್ಲೂ ನಿಮ್ಮ ಮಾಹಿತಿ ಪೊಸ್ಟ್‌ ಆಗುತ್ತದೆ.
ಈ ತಂತ್ರಾಂಶವನ್ನು ಟೆಕ್‌ ಮಹೀಂದ್ರ ಒಂದು ವರ್ಷ ಹಿಂದೆ ಬಿಡುಗಡೆ ಮಾಡಿತ್ತು. ಆದ್ರೆ ಒಂದು ವರ್ಷಕ್ಕೆ 100 ರೂಪಾಯಿ ನೀಡಿ ಚಂದದಾರರಾದ್ರೆ ಆದ್ರೆ ಮಾತ್ರ ನೀವು ಈ ಆಪ್ಲಿಕೇಶನ್‌ ಬಳಸಬಹುದಿತ್ತು. ಇದೀಗ "ಫೈಟ್‌ಬ್ಯಾಕ್‌" ತಂತ್ರಾಶ ಉಚಿತವಾಗಿ ಸಿಗುತ್ತಿದ್ದು ನಿಮಗೆನಾದ್ರೂ ಈ ಆಪ್ಲಿಕೇಶನ್‌ ಇಷ್ಟವಾಗಿದ್ರೆ ಫೈಟ್‌ಬ್ಯಾಕ್‌ ಜಾಲತಾಣಕ್ಕೆ ಭೇಟಿನೀಡಿ. ನೋಕಿಯಾ, ಬ್ಲಾಕ್ಬೆರ್ರಿ, ಆಂಡ್ರಾಯ್ಡ್ ತಂತ್ರಾಂಶಗಳಿಗಾಗಿ ಕೊಂಡಿ:  http://www.fightbackmobile.com

Tuesday, January 1, 2013

ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಮಾಹಿತಿ ನೀಡುವ ಜಾಲತಾಣ


ಪ೦ಚಮ೦ತ್ರ ಮತ್ತು ಸಪ್ತಸೂತ್ರ
“ಮರ್ತ್ಯಜೀವನದ ತಾಟಸ್ಥ್ಯಮ೦ ಕಡೆಕಡೆದು
ಶ್ರದ್ಧೆ ಸ೦ದೇಹಗಳನಿರದೆ ಹೊಡೆದೆಬ್ಬಿಸುವ,
ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷ೦ಗಳ೦
ಕೆರಳಿಸುವ ಶತಶತ ಮತ೦ಗಳ೦ ತಾಮಲ್ಲಿ
ರಾರಾಜಿಸಿದುವಗ್ನಿವರ್ಣದ ವೃಕ೦ಗಳೋಲ್,
ಜೋಲ್ವ ಜಿಹ್ವೆಯೊಳತಿ ಭಯಾನಕ೦-!”

          ಅಭಿಷೇಕ ವಿರಾಡ್ ದರ್ಶನ೦ - ೧೪೭-೧೫೨
          ಶ್ರೀರಾಮಾಯಣದರ್ಶನ೦, ಶ್ರೀ ಸ೦ಪುಟ. ಸ೦.೧೩

ಪ್ರತಿಯೊ೦ದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.
ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿ೦ದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿ೦ದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅ೦ದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸ೦ಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪ೦ಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ! ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’   

ಇಡೀ ವಿಶ್ವಕ್ಕೆಲ್ಲಾ ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರದ ಮಹಾನ್ ಕವಿ ಕುಪ್ಪಳಿ ವೆಂಕಟಪ್ಪಗೌಡ (ವೆಂಕಟಯ್ಯಗೌಡ) ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ - ಕುವೆಂಪು) ಅವರ ಜನನ, ಬಾಲ್ಯ ಹಾಗೂ ಜೀವನ. ನೆನಪು, ಕೃತಿಗಳು, ಅಪರೂಪದ ಛಾಯಾಚಿತ್ರಗಳು, ಹಸ್ತಪ್ರತಿಗಳು ಹಾಗೂ ವಿಶ್ವಮಾನವ ಸಂದೇಶದ ಬಗ್ಗೆ ಮಾಹಿತಿ ನೀಡುವ ಕುವೆಂಪು.com ಅಂತರ್ಜಾಲ ತಾಣ. http://kuvempu.com

ಹಬ್ಬ ಹರಿದಿನಗಳ ಮಾಹಿತಿಗೆ ಜಾಲತಾಣ

ಇತ್ತೀಚೆಗಷ್ಟೆ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದೇವೆ. ಇದರ ಹಿನ್ನೆಲೆ ನಮ್ಮಲ್ಲಿ ಬಹುತೇಕರಿಗೆ ಗೊತ್ತು. ಜತೆಗೆ ಅನೇಕ ಧರ್ಮಗಳ ಬೀಡಾದ ಭಾರತದಲ್ಲಿ ಸದಾ ಹಬ್ಬಗಳು ಜರುಗುತ್ತಲೇ ಇರುತ್ತವೆ. ಹಾಂಗತ ಎಲ್ಲರಿಗೂ, ಎಲ್ಲಾ ಧರ್ಮಗಳ ಹಬ್ಬಗಳ ಬಗೆಗೂ ಗೊತ್ತಿರುತ್ತದೆ ಅಂತೇನಿಲ್ಲ.
ನಿಮಗೇನಾದರೂ ಬೇರೆ ಬೇರೆ ಧರ್ಮಗಳ, ಮಹತ್ವದ ಹಬ್ಬಗಳ ಬಗ್ಗೆ ತಿಳಿದುಕೊಳ್ಳಬೇಕೆನಿಸುವುದೇ? ಹಾಗಿದ್ದರೆ ಈ ಜಾಲತಾಣಕ್ಕೆ ಬೇಟಿನೀಡಲೇಬೇಕು. ಯಾವ್ಯಾವ ಹಬ್ಬಗಳನ್ನು ಯಾವ್ಯಾವಾಗ, ಎಲ್ಲೆಲ್ಲಿ ಆಚರಿಸುತ್ತಾರೆ? ಅದರ ಮಹತ್ವ ಏನು? ಎನ್ನುವಂತಹ ವಿವರಗಳಿವೆ.
ಅಲ್ಲದೆ ಯಾವ ವಿವರ ನಿಮಗೆ ಬೇಕೋ ಅದು ತಕ್ಷಣ ಕೈಗೆಟಕುವಂತೆ ಆಕಾರಾದಿಯಾಗಿ, ತಿಂಗಳುಗಳ ಪ್ರಕಾರ, ರಾಜ್ಯಗಳ ಪ್ರಕಾರ, ಪ್ರಮುಖ ದಿನಗಳ ಪ್ರಕಾರ, ರಜಾದಿನಗಳ ಪ್ರಕಾರ, ಆಹಾರ ಪದ್ದತಿಗಳ ಪ್ರಕಾರ, ದೇವರು, ದೇವತೆಗಳ ಪ್ರಕಾರ ಮತ್ತು ಧರ್ಮಗಳ ವಿಭಾಗದ ಮೂಲಕ ಹೀಗೆ ಹೀಗೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದೆ. ಹೀಗಾಗಿ ಇಲ್ಲಿಗೊಮ್ಮೆ ನಿಮ್ಮ ಬೇಟಿ ನೀಡಿ ನಮ್ಮ ದೇಶದ ಸಂಪ್ರದಾಯಗಳ ಬಗ್ಗೆ ಮಾಹಿತಿ ಪಡೆಯಲು ಜಾಲತಾಣ ಕೊಂಡಿ:  http://www.festivalsofindia.in

ಸಾಹಿತ್ಯ ಲೋಕ

ಸಾಹಿತ್ಯ ಎಂದರೆ ನಿಮಗೆ ಇಷ್ಟವೇ? 
ಷೇಕ್ಸ್ ಪಿಯರ್, ಲಿಯೋ ಟಾಲ್ ಸ್ಟಾಯ್, ಪುಷ್ಕಿನ್, ಮಿಲ್ಟಾ, ವಡ್ಸ್ ವರ್ಥ್, ಕಾಪ್ಕಾ, ಕಮೂ, ಕೀಟ್ಸ್, ರಾಬರ್ಟ್ ಬ್ರೌನಿಂಗ್, ಆರಿಸ್ಟಾಟಲ್, ಟ್ಯಾಗೂರ್, ಒ.ಹೆನ್ರಿ, ಪ್ಲೇಟೂ, ಎವರನ್ನೇಲ್ಲಾ ಓದಿದ್ದೀರಾ? ಅಥವಾ ಓದಬೇಕೆಂದುಕೊಂಡಿದ್ದೀರಾ?
ಈ ಧಾವಂತದ ಬದುಕಿನಲ್ಲಿ ಇವನ್ನೇಲ್ಲ ಓದೋದು ಹೇಗೆ ಅಂತ ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಆನ್ಲೈನ್ ಲಿಟರೇಚರ್ ಡಾಟ್ ಕಾಮ್ ಈ ತಾಣದಲ್ಲಿ ಸಾಹಿತ್ಯದ ಸಮೃದ್ದ ರಸದೌತಣ ದೊರೆಯುತ್ತದೆ. ಬಿಡುವಿನಲ್ಲಿ ಈ ತಾಣಕ್ಕೆ ಬಂದರೆ ಇವರನ್ನೆಲ್ಲ ಓದಿಕೊಳ್ಳಬಹುದು. 250 ಕ್ಕೂ ಹೆಚ್ಚು ಲೇಖಕರ ಕತೆ, ಕವಿತೆ, ಪುಸ್ತಕಗಳು ಇಲ್ಲಿ ನಿಮಗೆ ಓದಿಗೆ ದೊರೆಯುತ್ತದೆ. ಜತೆಗೆ ಈ ಎಲ್ಲ ಲೇಖಕರ ಜೀವನದ ಸಂಕ್ಷಿಪ್ತ ಪರಿಚಯವೂ ಇದೆ. ಜೊತೆಗೆ ಸಾಹಿತ್ಯದ ಓದುಗರಿಗಾಗಿ ಆಕರ್ಷಕ ಸ್ಪರ್ಧೆಗಳೂ ಇರುವುದು ಈ ತಾಣದ ವಿಶೇಷ. ನಿಮ್ಮ ನೆಚ್ಚಿನ ಬರಹಗಾರರನ್ನೆಲ್ಲ ಇಲ್ಲಿ ಓದಿಕೊಳ್ಳಬಹುದು. ಹಾಗಿದ್ದರೆ ಏಕೆ ತಡ? ಕೊಂಡಿ ಕ್ಲಿಕ್ಕಿಸಿ. http://www.online-literature.com

ಕನ್ನಡದಲ್ಲಿ ಶುಭಾಶಯ

ಕನ್ನಡದಲ್ಲಿ ನಿಮ್ಮ ಶುಭಸಂದೇಶಗಳನ್ನು ಕಳುಹಿಸಲು ಇದೋ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ! 
ಯಾವುದೇ ಶುಭಸಮಾರಂಭಗಳಿಗೆ ಸೂಕ್ತವಾಗಿ ನಿಮ್ಮ ವಿಶ್ವಾಸ, ಪ್ರೀತಿ, ಪ್ರೇಮ, ಭಾವನೆಗಳನ್ನು ನಿಮ್ಮ ಮಾತೃಭಾಷೆಯಲ್ಲೇ ವ್ಯಕ್ತಪಡಿಸುವಂತಹ ವಿಶಿಷ್ಟ ಅಂಚೆ ಕಾಗದಗಳನ್ನು ಪ್ರಸ್ತುತಪಡಿಸಬಹುದು.
ರಜಾದಿನಗಳಲ್ಲಿ, ವಿಶೇಷ ಹಬ್ಬಹರಿದಿನಗಳಲ್ಲಿ ನಿಮ್ಮ ಆತ್ಮೀಯ ಸ್ನೇಹಿತರಿಗೆ ಬಂದುಭಾಂದವರಿಗೆ ಕನ್ನಡದಲ್ಲಿ ಶುಭಾಷಯ ತಿಳಿಸುವುದಕ್ಕಿಂತ ಸಂತೋಷ ಬೇರೇನಿದೆ ಅಲ್ವಾ? 
ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಅಭಿನಂದನೆ, ರಜಾದಿನಗಳು, ವಿಶೇಷ ಕಾಗದ, ಧನ್ಯವಾದ ನಿಮ್ಮ ಕನಸಿನ ಇನ್ನಿತರೆ ಯಾವುದೇ ಬಗೆಯ ಶುಭಾಷಯ ಪತ್ರಗಳನ್ನು ರಚಿಸಿ ಹಂಚಿಕೊಳ್ಳಲು.
ಕನ್ನಡದ ಶುಭಾಶಯ ಪತ್ರಗಳನ್ನು ಲಭ್ಯವಾಗಿಸುವ ಅಂತರ್ಜಾಲ ತಾಣವೊಂದಿದೆ,ಅದುವೆ ಶುಭಾಷಯ ಡಾಟ್ ಕಾಮ್ ಜಾಲತಾಣ. ವಿವಿಧ ಸಂದರ್ಭಗಳಿಗೆ ಸೂಕ್ತವಾದ ಶುಭಾಶಯ ಪತ್ರಗಳು ಇಲ್ಲಿವೆ. ಬೇಕಾದರೆ ನಿಮಗೆ ಸೂಕ್ತವಾದ ಪತ್ರವನ್ನು ವಿನ್ಯಾಸ ಮಾಡಿಕೊಡುವ ಉಚಿತ ಸೇವೆಯೂ ಇಲ್ಲಿ ಲಭ್ಯ. ಆಯ್ದ ಪತ್ರವನ್ನು ಬೇಕಾದ ಮಿಂಚಂಚೆ ವಿಳಾಸಕ್ಕೆ ಕಳುಹಿಸಲು ಅಂತರ್ಜಾಲ ತಾಣವು ಅನುಕೂಲ ಕಲ್ಪಿಸಿದೆ. ಶುಭಾಶಯ ಪತ್ರಗಳ ಜತೆ ಹಿನ್ನೆಲೆ ಸಂಗೀತ, ಅನಿಮೇಶನ್ ಮುಂತಾದ ಸೌಲಭ್ಯಗಳೂ ಸಿಗುತ್ತವೆ. ಇನ್ನೇಕೆ ತಡ ಕೂಡಲೇ ನಿಮ್ಗಿಷ್ಟವಾದ ಕಾಗದ ರಚನೆಗೆ ಜಾಲತಾಣ ವಿಳಾಸ ಕೊಂಡಿ: http://www.shubhashaya.com

ಬಿಲ್ ಮೇಡ್ ಐಡಿ ಮೂಲಕ ಅತಿ ಸರಳ ವಿಧಾನದಿಂದ ಪಾವತಿ

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಲಾಭ ಪಡೆದಿರುವ ಸ್ಥಳೀಯ ಯುವ ಟೆಕ್ಕಿಗಳ ತಂಡ ಬಿಲ್ ಪಾವತಿ ಮಾಡಲು ಜನಸಾಮಾನ್ಯರು ಪಡುವ ಪಾಡನ್ನು ಹೋಗಲಾಡಿಸಲು ’ಬಿಲ್ ಮೇಲ್ ಐಡಿ’ ಎಂಬ ವೆಬ್ ಪೋರ್ಟಲ್ ಗೆ ಡಿ.13ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಿಲ್ ಪಾವತಿ ಅಷ್ಟೇ ಅಲ್ಲದೆ, ಇ ವಾಣಿಜ್ಯ ಉದ್ಯಮಿಗಳು, ಮಾರಾಟಗಾರರು ಇತರೆ ಗ್ರಾಹಕರಿಗೂ ಈ ತಾಣ ಅನುಕೂಲವಾಗಲಿದೆ. ಬ್ಯಾಂಕ್ ಹಾಗೂ ಜನಸಮಾನ್ಯರ ನಡುವಿನ ಸಂಪರ್ಕ ಕೊಂಡಿಯಾಗಿರುವ ಈ ತಾಣ ವಿಶ್ವದ ಪ್ರಪ್ರಥಮ ವಾಣಿಜ್ಯ ನೆಟ್ ವರ್ಕಿಂಗ್ ಸಾಧನವಾಗಲಿದೆ.

ಬಿಲ್ ಪಾವತಿ ಅತಿ ಸರಳ: ಬಿಲ್ ಮೇಲ್ ಐಡಿಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಸರಳವಾದ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಬಿಲ್ ಮೇಲ್ ಐಡಿ ಪಡೆದ ಬಳಕೆದಾರ ನೀರು, ವಿದ್ಯುತ್ ಹಾಗೂ ಇನ್ನಿತರ ಸಂಸ್ಥೆಗಳ ಬಿಲ್ ಪಾವತಿಯನ್ನು ಸರಳ ವಿಧಾನದಿಂದ ಮಾಡಬಹುದು. ಮೊಬೈಲ್, ಕಂಪ್ಯೂಟರ್, ಬ್ಯಾಂಕ್ ಕೌಂಟರ್, ಎಟಿಎಂ, ಕಿಯೋಸ್ಕ್, ತೃತೀಯ ಪಕ್ಷದ ಫ್ರಾಂಚೈಸಿ ಮುಂತಾದ ಸ್ಥಳಗಳಲ್ಲಿ ಬಿಲ್ ಮೇಲ್ ಐಡಿ ಮೂಲಕ ಗ್ರಾಹಕರು ಬಿಲ್ ಪಾವತಿಸಬಹುದಾಗಿದೆ.

ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳೊಂದಿಗೆ ಬಿಲ್ ಮೇಲ್ ಐಡಿ ಹಲವು ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡಿಕೊಳ್ಳಲಿದ್ದು, ಈ ತಾಣದಲ್ಲಿ ನೋಂದಾಯಿಸಿಕೊಂಡ ಗ್ರಾಹಕರು ವಿವಿಧ ಬಿಲ್ಲಿಂಗ್ ಏಜೆನ್ಸಿಗಳು ಮತ್ತು ಸೇವೆ ನೀಡುವವರಿಗೆ ಬಿಲ್ ಮೇಲ್ ಐಡಿ ಮೂಲಕ ಬಿಲ್‌ಗಳನ್ನು ಪಾವತಿಸಬಹುದು. ಬಿಲ್ ಪಾವತಿದಾರರಿಗೆ ಬಿಲ್‌ಮೇಲ್ ಐಡಿ ಉಚಿತವಾಗಿ ಈ ಸೇವೆ ನೀಡುತ್ತದೆ.

ಇ ವಾಣಿಜ್ಯಕ್ಕೂ ಅನುಕೂಲ: ವ್ಯಾಪಾರಿಗಳು ತಮ್ಮ ಸಂಸ್ಥೆಗೆ ಸಂಬಂಧಿಸಿದ ಬಿಲ್‌ಗಳನ್ನು ತಯಾರಿಸಲು ಬಿಲ್‌ಮೇಲ್ ಐಡಿ ಯನ್ನು ಉಪಯೋಗಿಸಬಹುದಾಗಿದ್ದು, ಇದು ಪ್ರಸಕ್ತ ಲಭ್ಯವಿರುವ ಎಲ್ಲ ಅಕೌಂಟಿಂಗ್ ಸಾಫ್ಟ್‌ವೇರ್‌ಗೂ ಸಂಪರ್ಕಿತವಾಗಿದೆ. ಉಚಿತವಾಗಿ ಡೌನ್‌ಲೋಡ್ ಮಾಡಬಲ್ಲಂತಹ ಬಿಲ್ಲಿಂಗ್ ಸಾಫ್ಟ್‌ವೇರ್ ಆವೃತ್ತಿ ಇದರಲ್ಲಿ ಲಭ್ಯವಿದೆ. ಇದನ್ನು ಆಫ್‌ಲೈನಮ್ ಬಳಕೆಗೆ ಬಳಸಿಕೊಳ್ಳಬಹುದಾಗಿದೆ. ಜಗತ್ತಿನ ಎಲ್ಲರೂ ಬಿಲ್ ಮೇಲ್ ಐಡಿ ಸಮುದಾಯದ ಸದಸ್ಯರಾಗಬಹುದು. ಬಿಲ್‌ಮೇಲ್ ಐಡಿ ಸದಸ್ಯ ಇನ್ನೊಬ್ಬ ಬಿಲ್‌ಮೇಲ್ ಐಡಿ ಸದಸ್ಯನಿಗೆ ಪರ್ಚೆಸ್ ಆರ್ಡರ್, ಬಿಲ್ ನೀಡುವಿಕೆ, ಬಿಲ್ ಹಣಪಾವತಿ, ವಸ್ತುವಿನ ಬಟವಾಡೆ ಮೊದಲಾದ ವಾಣಿಜ್ಯ ಪ್ರಕ್ರಿಯೆಗಳನ್ನು ಸರಳವಾಗಿ ನಡೆಸಬಹುದಾಗಿದೆ . ಹೆಚ್ಚಿನ ಮಾಹಿತಿಗೆ ಜಾಲತಾಣ ಕೊಂಡಿ:

Saturday, December 29, 2012

ಕನ್ನಡ ಬರಲ್ವಾ? "ಮಾತಾಡಿ" ನೋಡಿ!


ಕನ್ನಡ ಈಗ ಬರೀ ರಾಜ್ಯದ ಸ್ಥಳೀಯ ಭಾಷೆಯಾಗಿ ಉಳಿದಿಲ್ಲ. ದೇಶದ ಇತರ ಪ್ರಾದೇಶಿಕ ಭಾಷೆಗಳ ಜೊತೆಯಲ್ಲಿ ಸರಿಯಾದ ಪೈಪೋಟಿ ನೀಡುವಂತಹ ಭಾಷೆಯಾಗಿ ಬೆಳೆದು ನಿಂತಿದೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಅಂತರಾಳದ ಮಾತು.

ಕನ್ನಡೇತರರು ಸುಲಭವಾಗಿ ಕನ್ನಡ ಮಾತನಾಡಲು ಸಹಾಯಕವಾಗುವಂತಹ ವೆಬ್‌ಸೈಟ್‌ನ್ನು ಡ್ರೀಮ್ಸ್‌ ಇನ್ಫರಾ ಸಂಸ್ಥೆ ಆರಂಭಿಸಿದೆ. ಇಂಗ್ಲೀಷ್‌, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಮುಖಾಂತರ ಮಾತಾಡಿ ಡಾಟ್ ಕಾಮ್ ಅಂತರ್ಜಾಲದಲ್ಲಿ ಸರಳವಾಗಿ ವಿಡಿಯೋ ಮುಖಾಂತರ ಕನ್ನಡ ಕಲಿಯಬಹುದಾಗಿದೆ. ಸದ್ಯಕ್ಕೆ ಹದಿನಾರು ವಿಡಿಯೋ ತುಣುಕುಗಳು ಜಾಲತಾಣದಲ್ಲಿ ಲಭ್ಯವಿದೆ. ಜಾಲತಾಣ ಕೊಂಡಿ: www.mathadi.com

Friday, December 28, 2012

ಚುಕುಬುಕು ಒಂದು ಓದಿನ ಬಂಡಿ!

ಚುಕುಬುಕು ಒಂದು ಓದಿನ ಬಂಡಿ! ಇದು ರೈಲೂ ಹೌದು, ಪ್ಲಾಟ್‌ಫಾರ್ಮೂ ಹೌದು. ಕನ್ನಡದ ಪುಸ್ತಕಪ್ರೇಮಿಗಳನ್ನೆಲ್ಲ ಒಂದೆಡೆ ಸೇರಿಸುವ ಚಂದದ ವೇದಿಕೆ ಅನ್ನಿ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಮುದ್ರಣವಾಗುವ ಓದಲು ಯೋಗ್ಯವಾದ ಹೊಸ ಕನ್ನಡಪುಸ್ತಕಗಳ ಸಂಖ್ಯೆ ಏಳು ಸಾವಿರ. ಆದರೆ ಭಾನುವಾರದ ಪುರವಣಿಗಳ ಪುಸ್ತಕಪರಿಚಯ ವಿಭಾಗದಲ್ಲಿ ಚೂರು ಜಾಗ ಪಡೆಯುವ ಅದೃಷ್ಟ ಏಳೆಂಟು ಪುಸ್ತಕಗಳಿಗೆ ಮಾತ್ರ. ಅಂದರೆ ಶೇಕಡಾ ೮೫ರಷ್ಟು ಪುಸ್ತಕಗಳು ಬಂದದ್ದು ಓದುಗನಿಗೆ ತಿಳಿಯುವುದೇ ಇಲ್ಲ. ಅಂಗಡಿಗೆ ಹೋಗಿ ನೋಡೋಣವೆಂದರೆ ಇಡೀ ರಾಜ್ಯದಲ್ಲಿರುವುದು ಹತ್ತು - ಹನ್ನೆರೆಡು ಪುಸ್ತಕದಂಗಡಿಗಳು ಮಾತ್ರ. ಓದುಗ ಮತ್ತು ಪ್ರಕಾಶಕನ ನಡುವಿನ ಬಹುಮುಖ್ಯ ಕೊಂಡಿಯೊಂದು ತಪ್ಪಿಹೋಗಿದೆ ಎಂದು ನಿಮಗನ್ನಿಸುವುದಿಲ್ಲವೆ? ಅದಕ್ಕೇ ಚುಕ್ಕುಬುಕ್ಕು ಎಂಬ ಲಿಂಕ್ ಟ್ರೈನು ಬಂದಿರುವುದು 
ಇಷ್ಟದ ಲೇಖಕನ ಹೊಸ ಪುಸ್ತಕ ಬಂತೆ? ಹೊಸ ಲೇಖಕರು ಯಾರಾದರೂ ಚೆನ್ನಾಗಿ ಬರೆಯುತ್ತಿದ್ದಾರಾ? ಒಂದು ಕತೆ ಅಥವಾ ಒಂದು ಅಧ್ಯಾಯ ಓದಿ ಇಷ್ಟವಾದರೆ ಮಾತ್ರ ಕೊಂಡುಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು? ಓದುವ ಹಸಿವಿನ ನಿಮ್ಮ ಆತಂಕಗಳಿಗೆಲ್ಲ ಸಮಾಧಾನ ನೀಡುವಂತಿದೆ ನಮ್ಮ ಚುಕ್ಕುಬುಕ್ಕು. ಇಲ್ಲಿ ನೀವು ಹೊಸದಾಗಿ ಪ್ರಕಾಶನಗೊಂಡ ಪುಸ್ತಕದ ಬೆಲೆ ಪುಟಸಂಖ್ಯೆ ಮಾತ್ರವಲ್ಲ, ಪುಸ್ತಕದ ಸಾರಾಂಶ, ಲೇಖಕರ ಪರಿಚಯ, ಪುಸ್ತಕದ ಬಗ್ಗೆ ಅವರ ಮಾತು, ಮುನ್ನುಡಿ-ಬೆನ್ನುಡಿಕಾರರ ಅನಿಸಿಕೆಗಳನ್ನೆಲ್ಲಾ ಓದಬಹುದು. ಅಷ್ಟೇ ಅಲ್ಲ, ಪುಸ್ತಕದ ಒಂದು ಅಧ್ಯಾಯವನ್ನು ಕೂಡ ಉಚಿತವಾಗಿ ಓದಬಹುದು ಅಂದರೆ ಖುಷಿಯಾಯಿತಲ್ಲವೆ?! ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಇಷ್ಟವಾದ ಪುಸ್ತಕಗಳನ್ನು ಕೊಳ್ಳಲು ಪ್ರಕಾಶಕರ ವಿಳಾಸ, ದೂರವಾಣಿ ಸಂಖ್ಯೆಗಳೂ ಇಲ್ಲಿ ಲಭ್ಯ. ಇನ್ನೇನು ತಾನೆ ಬೇಕು? 
ಅಷ್ಟೆಲ್ಲಾ ಶ್ರದ್ಧೆಯಿಂದ ಮುದ್ರಿಸಿದ ಪುಸ್ತಕ ಬಂದಿದೆ ಎಂದು ಓದುಗರಿಗೆ ತಿಳಿಯದೇ ಹೋಗುವ ಪ್ರಕಾಶಕನ ಸಂಕಟ ನಮಗೆ ಅರ್ಥವಾಗುತ್ತದೆ. ಸಾಪ್ತಾಹಿಕ ಪುರವಣಿಗಳಲ್ಲಿ ವಿಮರ್ಶೆಯ ಮಾತಿರಲಿ, ಸಾದರ ಸ್ವೀಕಾರದಲ್ಲಾದರೂ ಬಂದರೆ ಅದೇ ಭಾಗ್ಯವೆಂದು ಹಪಹಪಿಸುವ ಬದಲು ಚುಕ್ಕುಬುಕ್ಕು ಎಂಬ ಈ ವೇದಿಕೆಯನ್ನು ಬಳಸಿಕೊಂಡು ಹಬ್ಬ ಮಾಡಿ. ಹೌದು! ನಮ್ಮ ವೆಬ್‌ಸೈಟಿನಲ್ಲಿ ನಿಮ್ಮ ಪುಸ್ತಕದ ಬಗ್ಗೆ ನಾಲ್ಕು ಸಾಲು ಬರೆಯುವ ಬಗ್ಗೆ ನಾವು ಮಾತನಾಡುತ್ತಿಲ್ಲ. ನಿಮ್ಮ ಪುಸ್ತಕಕ್ಕೇ ಒಂದು ಚೆಂದದ ಕಿರುವೆಬ್‌ಸೈಟಿನ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಾಲಕ್ಕು ಪೂರ್ಣ ವೆಬ್‌ಪುಟಗಳು ನಿಮ್ಮ ಕನಸಿನ ಪುಸ್ತಕಕ್ಕೆಂದೇ ಮೀಸಲು! ದೊಡ್ಡ ಮುಖಪುಟ, ಲೇಖಕನ ಪರಿಚಯ, ಸಾರಾಂಶ, ಉಚಿತಪುಟ, ವಿಮರ್ಶೆಗಳು, ಓದುಗರ ಅನಿಸಿಕೆಗಳು. ಒಂದು ಪುಸ್ತಕವನ್ನು ಸೆಲೆಬ್ರೇಟ್ ಮಾಡುವ ಇದಕ್ಕಿಂತ ಉತ್ತಮ ವಿಧಾನ ಬೇರೊಂದಿಲ್ಲ. ನೀವೇ ನೋಡಿ. ಚುಕ್ಕುಬುಕ್ಕು ಸಾಧ್ಯತೆಗಳನ್ನು ಬಳಸಿಕೊಳ್ಳಿ. ಸರಿಯಾದ ಓದುಗರನ್ನು ತಲುಪಿ. 

  • ಪುಸ್ತಕಗಳಲ್ಲದೆ ಚುಕ್ಕುಬುಕ್ಕುವಿನಲ್ಲಿ ಮತ್ತೇನಿದೆ?
ಚುಕ್ಕುಬುಕ್ಕುವನ್ನು ಒಂದು ಲವಲವಿಕೆಯ ಓದುಗರ ಕೂಡುಸ್ಥಳವನ್ನಾಗಿಸಬೇಕೆಂಬುದು ನಮ್ಮ ಆಶಯ. ಇಲ್ಲಿ ಸದಾ ಯಾವುದಾದರೊಂದು ಸ್ಪರ್ಧೆ, ಚರ್ಚೆಗಳು ನಡೆಯುತ್ತಿರುತ್ತವೆ. ನೀವು ಪಾಲ್ಗೊಳ್ಳಬಹುದು. ಬಹುಮಾನಗಳನ್ನು ಗೆಲ್ಲಬಹುದು. ಈ ತಾಣ ಏನಾಗಿ ರೂಪುಗೊಳ್ಳಬೇಕೆಂಬುದು ನಿಮ್ಮ ಪಾಲ್ಗೊಳ್ಳುವಿಕೆಯ ಮೇಲೆಯೂ ಅವಲಂಬಿತವಾಗಿದೆ. ಮತ್ತೆ ಮತ್ತೆ ಭೇಟಿಕೊಡಿ. ನಿಮ್ಮ ತಾಣವನ್ನಾಗಿ ಇದನ್ನು ರೂಪಿಸಿ.
 ಚುಕ್ಕುಬುಕ್ಕು ಜಾಲತಾಣ ಕೊಂಡಿ: http://chukkubukku.com


Wednesday, December 26, 2012

ಹಳದಿ ಬಣ್ಣದ ಅಂಟುಚೀಟಿ Yellow Stickies

ಹಳದಿ ಬಣ್ಣದ ಅಂಟುಚೀಟಿ ಬಳಸಿದ್ದೀರಿ ತಾನೆ. ಏನೇನೋ ಕೆಲಸಗಳನ್ನು ಮಾಡಬೇಕಾಗಿದೆ. ಕೆಲವೆಲ್ಲ ಮರೆತು ಹೋಗುತ್ತವೆ. ಅದಕ್ಕಾಗಿ ಅಲ್ಲಿ ಇಲ್ಲ ಸಿಕ್ಕ ಸಿಕ್ಕಲ್ಲೆಲ್ಲ ಹಳದಿ ಬಣ್ಣದ (ಈಗೀಗ ಬೇರೆ ಬೇರೆ ಬಣ್ಣಗಳಲ್ಲು ಬರುತ್ತಿವೆ) ಅಂಟಿಸಿ ಪುನಃ ತೆಗೆಯಬಹುದಾದ ಸ್ಟಿಕೀ ನೋಟ್ಸ್‌ಗಳನ್ನು ಬಳಸುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಗಣಕಗಳಲ್ಲೂ ಇದೇ ಮಾದರಿಯ ಸ್ಟಿಕಿನೋಟ್ಸ್ ತಂತ್ರಾಂಶ ಲಭ್ಯವಿದೆ. ಇದು ವಿಂಡೋಸ್ ಜೊತೆ ಬರುವ ಸ್ಟಿಕಿನೋಟ್ಸ್ ತಂತ್ರಾಂಶಕ್ಕಿಂತ ಚೆನ್ನಾಗಿದೆ. ಇದರಲ್ಲಿ ಚಿತ್ರಗಳನ್ನೂ ಸೇರಿಸಬಹುದು. ಸ್ನೇಹಿತರ ಜೊತೆ ಹಂಚಿಕೊಳ್ಳಲೂಬಹುದು.
ಅಂತಹ ಒಂದು ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ.   http://www.zhornsoftware.co.uk/stickies/download.html

Tuesday, December 25, 2012

ಆಗಸದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನೋಡಿ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು (ಐ.ಎಸ್.ಎಸ್.) ನೋಡಬೇಕು ಎಂಬ ಆಸೆ ಇದೆಯೇ? ಅಂತಹ ಆಸೆ ಇದ್ದರೆ ಅದಕ್ಕೆ ಈಗ ಅವಕಾಶ ಇದೆ. ನಿಮ್ಮ ಮನೆಯ ಮೇಲಿನಿಂದ ಐ.ಎಸ್.ಎಸ್ ಹಾದು ಹೋಗುವುದಿದ್ದರೆ ಬರಿಗಣ್ಣಿನಿಂದ ಅದನ್ನು ನೋಡುವುದಕ್ಕೆ ಸಾಧ್ಯ ಇದೆ. ಇದಕ್ಕಾಗಿ ನಾಸಾ ಹೊಸ ಎಸ್.ಎಂ.ಎಸ್ ಸೇವೆಯನ್ನು ಆರಂಭಿಸಿದೆ.
"ಐ.ಎಸ್.ಎಸ್ ನೋಡಿ" ಎಂಬ ಕೇಂದ್ರವನ್ನು ನಾಸಾ ಆರಂಭಿಸಿದೆ. ಅಲ್ಲಿ ನೀವು ನೋಂದಣಿ ಮಾಡಿಕೊಂಡರೆ ಐ.ಎಸ್.ಎಸ್ ನಿಮ್ಮ ಮನೆಯ ಮೇಲೆ ಹಾದು ಹೋಗುವ ಸಂದರ್ಭದಲ್ಲಿ ನಾಸಾ ನಿಮಗೆ ಎಸ್.ಎಂ.ಎಸ್ ಕಳುಹಿಸುತ್ತದೆ. ಆಗ ನೀವು ಬರಿಗಣ್ಣಿನಿಂದ ಐ.ಎಸ್.ಎಸ್ ಅನ್ನು ನೋಡಬಹುದು.
ಮುಂಜಾನೆ ಮತ್ತು ಮುಸ್ಸಂಜೆ ಆಕಾಶ ಅತ್ಯಂತ ಶುಭ್ರವಾಗಿರುವಾಗ ಬಾಹ್ಯಾಕಾಶ ಕೇಂದ್ರ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ. ಇದು ವೇಗವಾಗಿ ಹಾದು ಹೋಗುವ ಬೆಳಕಿನ ಕಿರಣದಂತೆ ಕಾಣಿಸುತ್ತದೆ.  ಜಾಲತಾಣ ಕೊಂಡಿ: http://spotthestation.nasa.gov

ಎರಡನೇ ವರ್ಷದ ಹರುಷದಲ್ಲಿ

ಈ ಡಿಸೆಂಬರ್ 25-12-2012ರ [ಎರಡು ವರ್ಷ] ದ ಹೊತ್ತಿಗೆ ಸರಿಯಾಗಿ 
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣ ವಿಶ್ವದಾದ್ಯಂತ "28000+" ಹೆಚ್ಚು ಬಾರಿ ತೆರೆದುಕೊಂಡಿದೆ.
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣದಿಂದಾಗಿ ವಿಶ್ವದಾದ್ಯಂತ ಗೆಳೆಯರು ಸಿಕ್ಕಿದ್ದಾರೆ.
ಜೊತೆಗೆ ನನ್ನ ನೆಚ್ಚಿನ ದಿನ ಪತ್ರಿಕೆಯಾದ ಸಂಯುಕ್ತ ಕರ್ನಾಟಕದಲ್ಲಿ "ಟೆಕ್ ಕನ್ನಡ" ಎಂಬ ಶಿರ್ಷೀಕೆಯಡಿಯಲ್ಲಿ  ತಂತ್ರಜ್ಞಾನದಿಂದ ಸಾಮಾನ್ಯನೆಡೆಗೆ ಎಂಬ ಅಂಕಣದಲ್ಲಿ ತಂತ್ರಜ್ಞಾನ, ಕಲಿಕೆ, ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಮುಂತಾದ ವಿಚಾರಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನಕ್ಕೆ ಅನುವು ಮಾಡಿಕೊಟ್ಟ ಸಯುಂಕ್ತ ಕರ್ನಾಟಕ ದಿನ ಪತ್ರಿಕೆಯ ಸುದ್ದಿ ಸಂಪಾದಕರಾದ ಶ್ರೀಯುತ ಚಾಮರಾಜ ಸವಡಿ ರವರಿಗೆ ನಾನು ಕೃತಜ್ಞ.
ವೆಬ್ ಲೋಕದಲ್ಲಿ ಇಷ್ಟಪಟ್ಟು ಬರೆದುದನ್ನು ಅಷ್ಟೇ ಖುಷಿಯಿಂದ ಓದಿ ಪ್ರೋತ್ಸಾಹಿಸುವ ನಿಮ್ಮಂಥ ಗೆಳೆಯರು.
 ಅದಕ್ಕೆ ನನ್ನ ದೊಡ್ಡ ನಮನಗಳು.

Thursday, December 6, 2012

ಗೂಗಲ್ ಸ್ಟೀಟ್‌ವ್ಯೂ

ಗೂಗಲ್ ಸ್ಟ್ರೀಟ್‌ವ್ಯೂ ಸೇವೆಯು ಜಗತ್ತಿನ ಸುಮಾರು ಹದಿನೇಳು ದೇಶಗಳ ರಸ್ತೆಯ ದೃಶ್ಯಗಳನ್ನು ನೇರವಾಗಿ ಜನರಿಗೆ ಒದಗಿಸುತ್ತದೆ. ಕಾರು, ಬಸ್, ಇನ್ನಿತರೆ ವಾಹನಗಳು, ಜನರು ಹಿಡಿದಿರುವ ಕ್ಯಾಮರಾದ ಮೂಲಕ ರಸ್ತೆಯ ದೃಶ್ಯಗಳನ್ನು ನೇರವಾಗಿ ಸೆರೆಹಿಡಿದು, ಗೂಗಲ್ ಮ್ಯಾಪ್ ತಾಣದ ಮೂಲಕ ಅದನ್ನು ಜನರೊಂದಿಗೆ ಹಂಚಿಕೊಳ್ಳುವ ಗೂಗಲ್ ಸ್ಟ್ರೀಟ್‌ವ್ಯೂ ಸೇವೆಯು ನಾರ್ವೆ, ಸಿಂಗಾಪೂರ್, ಕೆನಡಾ, ಮಲೇಶ್ಯಾ, ಥೈಲ್ಯಾಂಡ್, ಅಮೆರಿಕಾ, ಲಂಡನ್, ಸ್ವೀಡನ್, ಡೆನ್ಮಾರ್ಕ್, ಟೈವಾನ್, ಇಟೆಲಿ, ಡೆನ್ಮಾರ್ಕ್ ಮೊದಲಾದ ಜಗತ್ತಿನ ಸುಮಾರು ಹದಿನೇಳು ದೇಶಗಳ ದೃಶ್ಯಗಳನ್ನು ಒಳಗೊಂಡಿದೆ. ಗೂಗಲ್ ತನ್ನ ಸ್ಟ್ರೀಟ್‌ವ್ಯೂನಲ್ಲಿ ಇಪ್ಪತ್ತೈದು ಸಾವಿರ ಮೈಲು ವಿವರಗಳನ್ನು ಹೊಂದಿದೆ. ಜಾಲತಾಣ ಕೊಂಡಿ: http://goo.gl/22Cly  ಅಥವಾ http://maps.google.co.in/intl/en/help/maps/streetview

ಸೃಜನಶೀಲರಿಗೆ ಸಾಮಾಜಿಕ ಜಾಲತಾಣ (ಕ್ಯುಕಿ)


ಇಂದು ಜಗತ್ತಿನ ಅಂರ್ತಜಾಲದಲ್ಲಿ ಫೇಸ್ಬುಕ್, ಟ್ವಿಟ್ಟರ್, ಲಿಂಕ್ಡಿನ್, ಗೂಗಲ್ ಪ್ಲಸ್, ಆರ್ಕುಟ್, ಯೂಟ್ಯೂಬ್ ಗೀಗೆ ಹಲವು ಹತ್ತು ಸಾಮಾಝಿಕ ಮಾಧ್ಯಮಗಳಿವೆ. ಇಂಥದೇ, ಇದಕ್ಕಿಂತ ಸೂಕ್ಷ್ಮ ಹಾಗೂ ಸೃಜನಶೀಲತೆಗೆ ಮೀಸಲಾದ ಬಹು ನಿರೀಕ್ಷಿತ ಸಾಮಾಜಿಕ ಮಾಧ್ಯಮ "ಕ್ಯುಕಿ" ಜಾಗತಿಕ ಮಟ್ಟದಲ್ಲಿ  ಹುಟ್ಟಿಕೊಂಡಿದೆ. ಕಲಾ ಪ್ರಪಂಚದಲ್ಲಿ ಈ ರಾಷ್ಟ್ರದ ಇಬ್ಬರು ಹೆಮ್ಮೆಯ ಪುತ್ರರೆನಿಸಿದ ಮುಂಬೈನ ಪ್ರಖ್ಯಾತ ಚಲನಚಿತ್ರ ನಿರ್ದೇಶಕ, ನಟ, ನಿರ್ಮಾಪಕ ಶೇಖರ್ ಕಫೂರ್ ಮತ್ತು ಆಸ್ಕರ್, ಗ್ರಾಮ್ಮೀ ಪ್ರಶಸ್ತಿ ವಿಜೇತ, ಪ್ರಸ್ತುತ ಭಾರತೀಯ ಚಲನಚಿತ್ರ ಸಂಗೀತ ದಿಗ್ಗಜ ಎ.ಆರ್.ರೆಹಮಾನ್ ಕ್ಯುಕಿಯ ಅಪ್ಪ,ಅಮ್ಮಂದಿರು.

ಭಾರತದ ಮೂಲೆ ಮೂಲೆಯಲ್ಲಿರುವ ಸಾವಿರಾರು ಕ್ರಿಯಾಶೀಲ ಮನಸ್ಸುಗಳು ತೆರೆದುಕೊಳ್ಳಲು "ಕ್ಯುಕಿ" ಸೂಕ್ತ ವೇದಿಕೆಯಾಗಿ ರೂಪಗೊಳ್ಳುತ್ತಿದ್ದು ಕಲಾ ಪ್ರಪಂಚದಲ್ಲಿ ಭಾರತೀಯ ಮನಸ್ಸುಗಳ ಕಲ್ಪನೆಯ ಮೂರ್ತಸ್ವರೂಪ ಪಡೆಯಲು "ಕ್ಯುಕಿ" ಮೊದಲ ಮೆಟ್ಟಿಲಾಗಲಿದೆ. ನಮ್ಮ ದೇಶಾದ್ಯಂತ ಪ್ರತಿಭಾನ್ವೇಷಣೆಯಲ್ಲಿ ಯುವ ಮನಸ್ಸುಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಒಂದು ಸೃಜನಶೀಲ ಸಾಮಾಜಿಕ ಜಾಲತಾಣ ರೂಪಿಸಿದ್ದಾರೆ. ಜಾಲತಾಣದಲ್ಲಿ ಆಗಲೇ ಸೃಜನಶೀಲ ಮನಸುಗಳು ಖಾತೆ ತೆರಿದಿದ್ದು ಅಸಂಖ್ಯಾತ ಸಂಖ್ಯೆಯಲ್ಲಿ ಖಾತೆಗಳು ತೆರೆಯಬೇಕಾಗಿದೆ. ಜಾಲತಾಣ ವಿಳಾಸ ಕೊಂಡಿ: http://www.qyuki.com

Thursday, November 22, 2012

ದಾರಿ ತೋರುವ ಸಂಗಾತಿ – ಜಿಪಿಎಸ್

‘ದಾರಿ ಯಾವುದಯ್ಯಾ ವೈಕುಂಠಕೆ ದಾರಿ ತೋರಿಸಯ್ಯಾ’ ಎಂದು ಹಾಡಿದ ದಾಸರು ಪ್ರಪಂಚದಿಂದ ಮುಕ್ತಿ ಪಡೆದ ನಂತರ ವೈಕುಂಠಕ್ಕೆ ದಾರಿ ತೋರಿಸು ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ವೈಕುಂಠದ ದಾರಿಯನ್ನು ಆ ಭಗವಂತ ತೋರಿಸುವನೋ ಇಲ್ಲವೋ ಕಂಡವರಿಲ್ಲ. ಆದರೆ ಈ ಭೂಮಿಯ ಮೇಲೆ ನೆಲ, ಜಲ ಹಾಗೂ ಗಾಳಿಯಷ್ಟೇ ಅಲ್ಲ ಅಂತರಿಕ್ಷದಲ್ಲಿ ಪಯಣಿಸುವಾಗಲೂ ದಾರಿ ತೋರಿಸುವ ಸಂಗಾತಿಯಂತಿರುವ ‘ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ರಿಸೀವರ್’ ಈಗ ಲಭ್ಯವಿದೆ. ಇದಕ್ಕೆ ಜಿಪಿಎಸ್ ಎಂದು ಹೇಳುವುದೇ ರೂಢಿ. ಇದನ್ನೇ ಕನ್ನಡಿಸಿ ‘ಭೌಗೋಳಿಕ ಸ್ಥಾನ ನಿರ್ದೇಶಕ’ ಎನ್ನಬಹುದು.

ಆದಿ ಮಾನವ ಗುಹೆಗಳಲ್ಲಿ ವಾಸಿಸುತ್ತಿದ್ದಾಗ ತನ್ನ ವಾಸಸ್ಥಾನದ ಗುರುತು ಕಂಡುಕೊಳ್ಳಲು ಏನು ಮಾಡುತ್ತಿದ್ದ ಎಂದು ಯೋಚಿಸಿದಾಗ ತಾನು ನಡೆಯುವ ದಾರಿಯಲ್ಲಿ ಮರಗಳ ಮೇಲೆ ಅಥವಾ ಕಲ್ಲಿನ ಮೇಲೆ ಏನಾದರೂ ಕೆತ್ತಿದ್ದಿರಬಹುದು ಎನಿಸುತ್ತದೆ.  ಕತ್ತಲಾದ ಮೇಲೆ ಆಕಾಶದಲ್ಲಿ ಕಾಣುವ ನಕ್ಷತ್ರಗಳು ಅವನಿಗೆ ದಾರಿ ತೋರಿರಬಹುದು. ಕ್ರಿಸ್ತನು ಹುಟ್ಟುವ ಜಾಗಕ್ಕೆ ಮೂರು ಜನ ಪ್ರವಾದಿಗಳಿಗೆ ದಾರಿ ತೋರಿಸಿದ್ದು ಮಿನುಗುತ್ತಿದ್ದ ನಕ್ಷತ್ರಗಳೇ ಅಲ್ಲವೆ? ಸಮುದ್ರಯಾನ ಮಾಡುವವರೂ ನಕ್ಷತ್ರಗಳನ್ನು ಗಮನಿಸುತ್ತಿದ್ದರು. ಅನಂತರ ದಿಕ್ಸೂಚಿಯನ್ನೂ ಬಳಸುತ್ತಿದ್ದರು. ಪ್ರಾಣಿಗಳು ತಾವು ಸಾಗಿದ ದಾರಿಯ ಜಾಡು ಹಿಡಿಯಲು ಅನುಕೂಲವಾಗುವಂತೆ ಅಲ್ಲಲ್ಲಿ ನಿಂತು ಮಲವಿಸರ್ಜನೆ ಮಾಡುತ್ತವೆ. ಆಕಾಶದಲ್ಲಿ ಹಾರುವ ಸಣ್ಣ ಪಕ್ಷಿಗಳೂ ಕೂಡ ಸೂರ್ಯನ ಚಲನೆ. ಭೂಮಿಯ ಆಯಸ್ಕಾಂತೀಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾರುತ್ತವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಕೆಲವು ಪಕ್ಷಿಗಳು ತಾವು ಹಾರುವ ಜಾಗಗಳನ್ನು ಕಣ್ಣಿನಿಂದ ಗುರುತಿಸುವ ಸಾಮರ್ಥ್ಯವನ್ನೂ ಹೊಂದಿರುವುವಂತೆ! ಅವುಗಳ ಪುಟ್ಟ ತಲೆಯಲ್ಲಿ ನಕ್ಷೆಗಳಿರುತ್ತವೆ ಎಂದರೆ ಸೋಜಿಗವಲ್ಲವೆ?

ಇತ್ತೀಚಿಗೆ ಯದ್ವಾತದ್ವ ಬೆಳೆಯುತ್ತಿರುವ ನಗರಗಳಲ್ಲಿ ಹೊಸಬರಿಗಿರಲಿ ಅಲ್ಲಿಯೇ ಹುಟ್ಟಿಬೆಳೆದವರಿಗೂ ಕೆಲವು ಸ್ಥಳಗಳು ಗೊತ್ತಿರುವುದಿಲ್ಲ. ಒಂದು ಭಾಗದಲ್ಲಿದ್ದವರಿಗೆ ಮತ್ತೊಂದು ಭಾಗದ ಪರಿಚಯವಿರುವುದಿಲ್ಲ. ಆದರೂ ಆ ಸ್ಥಳಕ್ಕೆ ಹೋಗಬೇಕಾಗುತ್ತದೆ. ಇದಕ್ಕೆ ಪರಿಹಾರವೇನು? ತಲುಪಬೇಕಾದ ಸ್ಥಳದ ವಿಳಾಸ ಹಾಗೂ ಗುರುತು ಪಡೆದುಕೊಂಡು ದಾರಿಯಲ್ಲಿ ಹೋಗುವಾಗ ಬೋರ್ಡ್‌ಗಳನ್ನು ನೋಡಿ ಖಚಿತ ಪಡಿಸಿಕೊಳ್ಳುವುದು. ಇಲ್ಲವೇ ಅಲ್ಲಿ ಯಾರನ್ನಾದರೂ ರಸ್ತೆ ಕೇಳುವುದು. ಇದು ಎಲ್ಲರಿಗೂ ಪರಿಚಿತವಾಗಿರುವ ವಿಧಾನ.

ಇದಲ್ಲದೆ ದಾರಿ ಕಂಡುಕೊಳ್ಳಲು ಭೂಪಟಗಳನ್ನು ಅನುಸರಿಸುವ ಮತ್ತೊಂದು ವಿಧಾವೂ ಇದೆ.. ಈಗ ಅಮೆರಿಕದ ‘ಗೂಗಲ್ ಅರ್ಥ್’ ಸಂಸ್ಥೆ ಉಪಗ್ರಹಗಳ ಸಹಾಯದಿಂದ ಭೂಮಿಯ ಹಲವಾರು ಚಿತ್ರಗಳನ್ನು ಸಂಗ್ರಹಿಸಿ ಇಡೀ ಭೂಮಂಡಲದ ಉತ್ತಮ ಮಟ್ಟದ ನಕ್ಷೆಗಳನ್ನು ತಯಾರಿಸಿ ಅಂತರಜಾಲದಲ್ಲಿ ಇರಿಸಿದೆ. ದೊಡ್ಡ ನಗರಗಳ ವಿವರವಾದ ನಕ್ಷೆಗಳು ಲಭ್ಯವಿವೆ. ನಾವು ಹೊರಡುವ ಜಾಗ ಮತ್ತು ತಲುಪುವ ಜಾಗಗಳೆರಡನ್ನೂ ಕಂಪ್ಯೂಟರ್ ನಕ್ಷೆಯ ಪುಟದಲ್ಲಿ ನಿಶ್ಚಿತ ಸ್ಥಳದಲ್ಲಿ ನಮೂದಿಸಿದರೆ ಸಾಕು. ಅವುಗಳ ನಡುವಿನ ದೂರ, ಅಲ್ಲಿಗೆ ಹೋಗಲು ಹತ್ತಿರದ ದಾರಿ, ಪ್ರಮುಖ ಗುರುತುಗಳು ಇತ್ಯಾದಿ ವಿವರಗಳು ಕ್ಷಣ ಮಾತ್ರದಲ್ಲಿ ಕಂಪ್ಯೂಟರ್ ಪರದೆಯ ಮೇಲೆ ಹಾಜರಾಗುತ್ತದೆ. ಈ ನಕ್ಷೆಯಲ್ಲಿ ಅಗತ್ಯವಾದ ಭಾಗವನ್ನು ಹಿಗ್ಗಿಸಿ ನೋಡುವ ಅವಕಾಶವೂ ಇದೆ.
ನಾನು ಮೊದಲ ಬಾರಿ ೨೦೦೪ನೆಯ ಇಸವಿಯಲ್ಲಿ ಅಮೆರಿಕಕ್ಕೆ ಹೋದಾಗ ನನಗೆ ಅಲ್ಲಿನ ಸ್ಥಳಗಳನ್ನು ನೋಡುವ ಕುತೂಹಲವಿತ್ತು. ಆಗಷ್ಟೇ ಇಪ್ಪತ್ತಾರು ವಸಂತಗಳನ್ನು ದಾಟಿದ್ದ ನನ್ನ ಮಗ ಆನಂದನಿಗೆ ಅಮೆರಿಕದ ವಿಶಾಲವಾದ, ಅಚ್ಚುಕಟ್ಟಾದ ರಸ್ತೆಗಳಲ್ಲಿ ವೇಗವಾಗಿ ಕಾರು ಓಡಿಸುವ ಆಸೆ. ಹೀಗಾಗಿ ಅಲ್ಲಿ ತಲುಪಿದ ಎರಡು ದಿನಗಳಲ್ಲಿಯೇ ಒಂದು ಬಾಡಿಗೆ ಕಾರನ್ನು ತಂದ. ಅವನ ಕೆಲಸದ ಮಧ್ಯೆ ಬಿಡುವು ಸಿಕ್ಕಾಗಲೆಲ್ಲಾ ಕಂಪ್ಯೂಟರ್‌ನಿಂದ ನಮಗೆ ಬೇಕಾದ ರಸ್ತೆಯ ನಕ್ಷೆಯನ್ನು ಮುದ್ರಿಸಿಕೊಂಡು ಯಾವುದಾದರೂ ಸ್ಥಳಕ್ಕೆ ಹೊರಟು ಬಿಡುತ್ತಿದ್ದೆವು. ನಾನು ಆ ನಕ್ಷೆಯನ್ನು ನೋಡುತ್ತಾ ಅವನಿಗೆ ದಾರಿ ಹೇಳುತ್ತಿದ್ದೆ. ಮೊದಲು ನನಗೆ ನಾನು ದಾರಿ ತಪ್ಪು ಹೇಳಿಬಿಟ್ಟರೆ ಎಂಬ ಭಯವೂ ಇತ್ತು. ಯಾಕೆಂದರೆ ಒಂದು ಬಾರಿ ತಿರುವನ್ನು ಮರೆತು ಮುಂದೆ ಹೋದರೆ ಮತ್ತೆ ಎಲ್ಲೆಂದರಲ್ಲಿ ತಿರುಗುವಂತಿಲ್ಲ ಮಧ್ಯ ರಸ್ತೆಯಲ್ಲಿ ರಿವರ್ಸ್ ಗೇರ್ ಹಾಕಿ ಎಲ್ಲಾ ಟ್ರಾಫಿಕ್ ನಿಲ್ಲಿಸುವುದಾಗಲೀ, ‘ಯು’ ಟರ್ನ್ ಇಲ್ಲದಿದ್ದರೂ ಜೊಂಯ್ ಎಂದು ತಿರುಗಿಸುವುದಾಗಲೀ ಊಹಿಸಲೂ ಸಾಧ್ಯವಿಲ್ಲದ ಕೆಲಸ(ಈಗ ಇಲ್ಲಿಯೂ ಕಷ್ಟ). ಸಧ್ಯ! ನಮಗೆ ಇಂತಹ ಯಾವ ಅನುಭವವೂ ಆಗಲಿಲ್ಲ. ಸಾಕಷ್ಟು ಸುತ್ತಿದೆವು.

ಆದರೆ ಇದೂ ತ್ರಾಸದಾಯಕ ಎನ್ನುವವರ ನೆರವಿಗೆ ಈಗ ದೊರಕುತ್ತಿದೆ ಜಿಪಿಎಸ್ ಗ್ರಾಹಕ. ೨೦೦೮ನೆಯ ಇಸವಿಯಲ್ಲಿ ಅಮೆರಿಕಕ್ಕೆ ಹೋದಾಗ ನನಗೆ ಬೇರೆ ಅನುಭವವೇ ಕಾದಿತ್ತು. ಈಗ ಯಾವ ನಕ್ಷೆಯೂ ಬೇಡ ಜಿಪಿಎಸ್ ಒಂದಿದ್ದರೆ ಸಾಕು ಎಂದು ಆನಂದ್ ಹೇಳಿದಾಗ ನನಗೆ ಬಹಳ ಆಶ್ಚರ್ಯವಾಯಿತು; ಕುತೂಹಲವೂ ಉಂಟಾಯಿತು. ಮೊದಲ ದಿನ ಕಾರಿನಲ್ಲಿ ಹೊರಡುತ್ತಿದ್ದಂತೆಯೇ ಸೊಸೆ ಕಲ್ಯಾಣಿ ಜಿಪಿಎಸ್‌ನೊಡನೆ ಕಾರಿಗೆ ಹತ್ತಿದಳು. ಇದು ದೊಡ್ಡ ಮೊಬೈಲ್‌ನಂತೆ ಕಾಣುತ್ತದೆ. ಅದರಲ್ಲಿ ನಾವು ತಲುಪಬೇಕಾದ ಸ್ಥಳದ ವಿವರಗಳನ್ನು ಅದರ ಪರದೆಯನ್ನು ಮುಟ್ಟಿ (touch screen) ತುಂಬಿಸಿದಳು. ಅದು ತನ್ನ ವ್ಯಾಖ್ಯಾನ ಪ್ರಾರಂಭಿಸಿತು.

ಹೌದು, ಇದು ನಮಗೆ ಮಾತನಾಡುತ್ತಾ ಸೂಚನೆ ನೀಡುತ್ತದೆ. ಚಾಲಕ/ಚಾಲಕಿ ರಸ್ತೆಯ ಮೇಲೆ ಕಣ್ಣಿರಿಸಿಕೊಂಡು ಕಾರು ಓಡಿಸಲು ಇದು ಅನುಕೂಲವಾಗಿದೆ. ಚಾಲಕರು ಒಬ್ಬರೇ ಇದ್ದಾಗ ಇದು ಅವರ ಸಂಗಾತಿಯೇ ಸೈ. ಈ ವ್ಯಾಖ್ಯಾನ ಇಂಗ್ಲೀಷ್, ಫ್ರೆಂಚ್, ಜಪಾನಿ ಇತ್ಯಾದಿ ಭಾಷೆಗಳಲ್ಲಿ ಲಭ್ಯವಿದೆ. ಇಂಗ್ಲೀಷ್‌ನಲ್ಲಿಯೂ ಅಮೆರಿಕನ್, ಬ್ರಿಟಿಷ್ ಇತ್ಯಾದಿ ಬೇರೆ ಬೇರೆ ಉಚ್ಚಾರಣೆಗಳೂ ದೊರೆಯುತ್ತವೆ. ಗಂಡಸಿನ ಧ್ವನಿ, ಹೆಂಗಸಿನ ಧ್ವನಿ ಎಂದು ನಮಗೆ ಹಿತವೆನಿಸುವ ಧ್ವನಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು. ಮೊದಲು ಯಾವ ದಿಕ್ಕಿನಲ್ಲಿ ಪ್ರಯಾಣ ಮಾಡಬೇಕು ಎಂದು ಸೂಚಿಸುತ್ತದೆ. ನಂತರ ಎಲ್ಲಿ ತಿರುಗಬೇಕಾದರೂ ಬಹಳ ಮುಂಚೆಯೇ ಮುಂದೆ ಬಲಗಡೆ ತಿರುಗಬೇಕು ಎಂದು ಹೇಳುತ್ತದೆ. ಅಲ್ಲದೆ ತಿರುವಿನಿಂದ ಸುಮಾರು ನೂರು ಮೀಟರ್ ದೂರದಲ್ಲಿದ್ದಾಗ ಮತ್ತೊಮ್ಮೆ ಎಚ್ಚರಿಕೆ ನೀಡುತ್ತದೆ. ಆಗಲೇ ಹೇಳಿದಂತೆ ಇದು ಆ ದೇಶದಲ್ಲಿ ಬಹಳ ಅವಶ್ಯಕ. ಹಾಗೂ ಒಂದು ವೇಳೆ ನೀವು ತಿರುಗದಿದ್ದರೆ ಅದು ಬಹಳ ಶಾಂತವಾಗಿ ನೀವು ತಿರುಗಬೇಕಾದ ಸ್ಥಳವನ್ನು ಬಿಟ್ಟು ಮುಂದೆ ಬಂದಿರುವಿರಿ. ಈಗ ಮುಂದೆ ನಿಮ್ಮ ಗುರಿ ತಲುಪಲು ಈ ಹೊಸ ರಸ್ತೆಯನ್ನು ಅನುಸರಿಸಿ ಎಂದು ಸೂಚನೆ ನೀಡುತ್ತದೆ. ಅಬ್ಬಾ! ಇದರ ಬುದ್ಧಿಯೇ! ಕಾರಿನ ಒಳಗೆ ಕುಳಿತೇ ಇದಕ್ಕೆ ಎಷ್ಟು ಸೂಕ್ಷ್ಮವಾಗಿ ಎಷ್ಟೆಲ್ಲಾ ವಿಚಾರಗಳೂ ತಿಳಿಯುತ್ತದೆಯಲ್ಲಾ ಎಂದು ನನಗೆ ಸೋಜಿಗವಾಯಿತು. ಪರಿಚಿತವಿಲ್ಲದ ಊರುಗಳಲ್ಲಿ ಪಯಣಿಸುವ ಪಯಣಿಗರಿಗೆ ವರವಾಗಿ ಬಂದಿದೆ ಈ ಜಿಪಿಎಸ್ ಗ್ರಾಹಕ. ಇದನ್ನು ಕೇವಲ ಊರೊಳಗೆ ಪಯಣಿಸಲು ಮಾತ್ರ ಬಳಸುವ ಉಪಕರಣವೆಂದು ಭಾವಿಸಬೇಡಿ. ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಮಾಡುವಾಗಲೂ ಇದು ನಿಮ್ಮ ಆಪ್ತಮಿತ್ರನೆಂದರೆ ತಪ್ಪಿಲ್ಲ. ನೀವು ಅದನ್ನು ಕೈಲಿ ಹಿಡಿದರೆ ಆಯಿತು. ಅದು ನಿಮ್ಮ ಕೈ ಹಿಡಿದು ನಡೆಸುತ್ತದೆ. ಇಂತಹ ಅದ್ಭುತ ಯಂತ್ರವನ್ನು ಹೇಗೆ ತಯಾರಿಸಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ನನಗೆ ಸಾಕಷ್ಟು ವಿಚಾರಗಳನ್ನು ತಿಳಿಸಿತು.

ಭೌಗೋಳಿಕ ಸ್ಥಾನ ನಿರ್ದೇಶಕ ವ್ಯವಸ್ಥೆ ಎಂದರೇನು?
ಭೂಮಿಯ ಮೇಲೆ ಪುಟ್ಟ ಪೆಟ್ಟಿಗೆಯಂತಿರುವ ಜಿಪಿಎಸ್ ಗ್ರಾಹಕ ಹಾಗೂ ಇದಕ್ಕೆ ನಿರಂತರವಾಗಿ ಅವಶ್ಯಕವಾದ ಮಾಹಿತಿ ಒದಗಿಸುತ್ತಾ ಅಂತರಿಕ್ಷದಲ್ಲಿ ಹಾರಾಡುತ್ತಿರುವ ಉಪಗ್ರಹಗಳ ಸಮೂಹವನ್ನು ಒಟ್ಟಾಗಿ ಭೌಗೋಳಿಕ ಸ್ಥಾನ ನಿರ್ದೇಶಕ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಮೊತ್ತಮೊದಲಿಗೆ ರೇಡಿಯೋ ತರಂಗಗಳನ್ನು ಬಳಸಿ ೧೯೪೦ರಲ್ಲಿಯೇ ತಯಾರಿಸಿದ್ದ  LORAN ಮತ್ತು Decca Navigator ಎಂಬ ಯಾನದರ್ಶಿ(Navigation) ವ್ಯವಸ್ಥೆಗಳು ವಿಜ್ಞಾನಿಗಳಿಗೆ ಇಂತಹ ಸ್ಥಾನ ಸೂಚಿಯನ್ನು ವಿನ್ಯಾಸ ಮಾಡಲು ಪ್ರೇರಣೆ ನೀಡಿದವು. ಇದರ ನಂತರ ೧೯೫೭ರಲ್ಲಿ ಸೋವಿಯಟ್ ರಶ್ಯಾ ಸ್ಪೂಟ್ನಿಕ್ ಎಂಬ ಕೃತಕ ಉಪಗ್ರಹವನ್ನು ಹಾರಿಸಿದಾಗ ಅಮೆರಿಕದ ಕೆಲವು ವಿಜ್ಞಾನಿಗಳು ಅದರ ಚಲನೆಯನ್ನು ಅಧ್ಯಯನ ಮಾಡುವಾಗ ಒಂದು ಕುತೂಹಲಕಾರಿ ಅಂಶವನ್ನು ಗಮನಿಸಿದರು. ಸ್ಪೂಟ್ನಿಕ್ ಭೂಮಿಯ ಕಡೆ ಧಾವಿಸುತ್ತಿದ್ದಾಗ ಅದರಿಂದ ಹೊರಹೊಮ್ಮಿದ ರೇಡಿಯೋ ತರಂಗಗಳ ಆವರ್ತ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಅದು ಭೂಮಿಯಿಂದ ದೂರ ಸರಿಯುತ್ತಿದ್ದಾಗ ಆ ಆವರ್ತ ಸಂಖ್ಯೆ ಕಡಿಮೆಯಾಗುತ್ತಿತ್ತು. ಇದಕ್ಕೆ ಭೌತವಿಜ್ಞಾನಿಗಳು ಬಹಳ ಹಿಂದೆಯೇ ನಿರೂಪಿಸಿರುವ ‘ಡಾಪ್ಲರ್ ಪರಿಣಾಮ’ವೇ ಕಾರಣ ಎಂದು ನಿರ್ಧರಿಸುವುದು ಕಷ್ಟವಾಗಲಿಲ್ಲ. ಅವರಿಗೆ ಭೂಮಿಯ ಮೇಲೆ ತಾವಿರುವ ಜಾಗದ ಅಕ್ಷಾಂಶ ರೇಖಾಂಶಗಳು ನಿಖರವಾಗಿ ತಿಳಿದಿದ್ದರಿಂದ ಆವರ್ತ ಸಂಖ್ಯೆಯಲ್ಲಿರುವ ಬದಲಾವಣೆಯನ್ನು ಆಧಾರವಾಗಿಟ್ಟು ಕೊಂಡು ಸ್ಪೂಟ್ನಿಕ್ ಉಪಗ್ರಹವು ಅಂತರಿಕ್ಷದಲ್ಲಿರುವ ಸ್ಥಾನವನ್ನು ಲೆಕ್ಕ ಹಾಕುವುದು ಸಾಧ್ಯವಾಯಿತು. ಇದೇ ರೀತಿ ಅಂತರಿಕ್ಷದಲ್ಲಿ ನಿರ್ದಿಷ್ಟ ಸ್ಥಾನಗಳಲ್ಲಿರುವ ಎರಡು ಉಪಗ್ರಹಗಳಿಂದ ಬರುವ ತರಂಗಗಳನ್ನು ಗ್ರಹಿಸಿ ಭೂಮಿಯ ಮೇಲೆ ಒಂದು ನಿರ್ದಿಷ್ಟ ಸ್ಥಳದ ಗುರುತನ್ನು ಕಂಡು ಹಿಡಿಯಬಹುದು ಎಂಬ ವಿಚಾರವೇ ಇಂದಿನ ಜಿಪಿಎಸ್ ವ್ಯವಸ್ಥೆಗೆ ಬುನಾದಿಯಾಯಿತು. ೧೯೬೦ರಲ್ಲಿ ಅಮೆರಿಕ ತನ್ನ ನೌಕಾ ಪಡೆಯಲ್ಲಿ ಬಳಸಲು ಮೊದಲ ಯಾನದರ್ಶಿ ವ್ಯವಸ್ಥೆಯನ್ನು ಸಿದ್ಧಪಡಿಸಿತು. ಇದಕ್ಕೆ ನೀಡಿದ ಹೆಸರು ಟ್ರಾನ್ಸಿಟ್(Transit). ಈ ವ್ಯವಸ್ಥೆಯಲ್ಲಿ ಅದು ಬಳಸಿದ ಉಪಗ್ರಹಗಳ ಸಂಖ್ಯೆ ಕೇವಲ ಐದು. ಆದರೆ ಈ ವ್ಯವಸ್ಥೆಯಲ್ಲಿ ಗಂಟೆಗೆ ಒಂದು ಬಾರಿ ಮಾತ್ರ ಮಾಹಿತಿ ಲಭ್ಯವಾಗುತ್ತಿತ್ತು.
ಈ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನಗಳು ಪ್ರಾರಂಭವಾದವು. ಉಪಗ್ರಹದ ದೂರವನ್ನು ಅಳೆಯಲು ಸಮಯವನ್ನೇ ಆಧರಿಸುತ್ತಿದ್ದುದರಿಂದ ನಿಖರವಾದ ಗಡಿಯಾರಗಳ ಅವಶ್ಯಕತೆ ಇತ್ತು. ೧೯೭೦ರಲ್ಲಿ ನಿಖರವಾದ ಪರಮಾಣು ಗಡಿಯಾರಗಳನ್ನು ಉಪಗ್ರಹದಲ್ಲಿಟ್ಟು ರವಾನಿಸುವ ಕಾರ್ಯದಲ್ಲಿ ಅಮೆರಿಕದ ನೌಕಾ ಪಡೆ ಯಶಸ್ವಿಯಾಯಿತು. ಅಂತರಿಕ್ಷದಲ್ಲಿ ನಿರ್ದಿಷ್ಟ ಸ್ಥಾನಗಳಲ್ಲಿರುವ ಎರಡು ಉಪಗ್ರಹಗಳಿಂದ ಸ್ವೀಕರಿಸಲ್ಪಟ್ಟ ಸಂಕೇತಗಳ ಅವಸ್ಥೆಯನ್ನು ಹೋಲಿಸುವ ಆಧಾರದ ಮೇಲೆ ೧೯೭೦ರಲ್ಲಿ ಅಮೆರಿಕದ ನೌಕಾದಳವು ಅಭಿವೃದ್ಧಿಪಡಿಸಲಾದ ಒಮೆಗಾ ನಾವಿಗೇಷನ್ ಸಿಸ್ಟಮ್ ಪ್ರಪಂಚದ ಮೊದಲ ರೇಡಿಯೋ ಯಾನದರ್ಶಿ ವ್ಯವಸ್ಥೆಯಾಯಿತು. ಇದನ್ನು ಬಳಸಿ ಒಂದು ಸ್ಥಳದ ನಿರ್ದೇಶಾಂಕ (co-ordinates)ಗಳನ್ನು ಒಂದು ಮೈಲಿ ನಿಖರತೆಯಲ್ಲಿ ಗುರುತಿಸುವುದು ಸಾಧ್ಯವಾಯಿತು. ಇದನ್ನು ಸಬ್‌ಮರೀನ್‌ಗಳಲ್ಲಿಯೂ ಬಳಸಲಾಯಿತು. ಇದಾದ ನಂತರ ೧೯೭೮ರಲ್ಲಿ ಪ್ರಯೋಗಾತ್ಮಕವಾದ ಬ್ಲಾಕ್_೧ (Block-I GPS) ಜಿಪಿಎಸ್ ವ್ಯವಸ್ಥೆಗೆ ಉಪಗ್ರಹಗಳನ್ನು  ಉಡಾಯಿಸಲಾಯಿತು.
 
ಪ್ರಸ್ತುತ ಅಮೆರಿಕದ ರಕ್ಷಣಾ ವ್ಯವಸ್ಥೆಯವರಿಂದ ನಿರ್ವಹಿಸಲಾಗುತ್ತಿರುವ ‘ನಾವ್‌ಸ್ಟಾರ್’ (NAVSTAR) ಎಂಬ ಭೌಗೋಳಿಕ ಸ್ಥಾನ ನಿರ್ದೇಶಕ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿದೆ. ಇದರಲ್ಲಿ ೨೧ ಕಾರ್ಯಶೀಲ ಉಪಗ್ರಹಗಳಿದ್ದು ಮತ್ತೆ ಮೂರು ಉಪಗ್ರಹಗಳು ಕೈಗಾವಲಿನಂತೆ ಸಿದ್ಧವಾಗಿರುತ್ತವೆ. ಮತ್ತಷ್ಟು ಅಂದರೆ ಒಟ್ಟು ೩೨ ಉಪಗ್ರಹಗಳು ಈ ವ್ಯವಸ್ಥೆಯಲ್ಲಿ ಇವೆ. ಹೆಚ್ಚುವರಿ ಉಪಗ್ರಹಗಳನ್ನು ಬೇರೆ ಕಾರ್ಯಗಳಿಗೆ ಅಥವಾ ತುರ್ತು ಪರಿಸ್ಥಿತಿಗಾಗಿ ಉಡಾಯಿಸಲಾಗಿದೆ. ಭೂಮಿಯ ಯಾವುದೇ ಸ್ಥಾನದಿಂದ ಒಂದು ಸಮಯದಲ್ಲಿ ನಾಲ್ಕು ಉಪಗ್ರಹಗಳಿಂದ ಸಂಕೇತಗಳನ್ನು ಪಡೆಯಲು ಸಾಧ್ಯವಾಗುವಂತೆ ಈ ಉಪಗ್ರಹಗಳನ್ನ್ಯು ಅಂತರಿಕ್ಷದಲ್ಲಿ ೧೦,೬೦೦ ಮೈಲಿ ಎತ್ತರದ ಕಕ್ಷೆಯಲ್ಲಿ ಬಿಡಲಾಗಿದೆ. ಈ ಉಪಗ್ರಹಗಳು ಆರು ವಿವಿಧ ಸಮತಲದಲ್ಲಿ ಸುತ್ತುತ್ತಿರುತ್ತವೆ. ಹೀಗಾಗಿ ಪ್ರತಿಯೊಂದು ಸಮತಲದಲ್ಲಿ ನಾಲ್ಕು ಉಪಗ್ರಹಗಳಿರುತ್ತವೆ. ಪ್ರತಿಯೊಂದು ಉಪಗ್ರಹದಲ್ಲಿಯೂ ಒಂದು ಕಂಪ್ಯೂಟರ್, ಒಂದು ಪರಮಾಣು ಗಡಿಯಾರ ಮತ್ತು ಸಂಕೇತಗಳನ್ನು ಬಿತ್ತರಿಸಲು ಒಂದು ರೇಡಿಯೋ ಟ್ರಾನ್ಸ್‌ಮಿಟರ್ ಅಳವಡಿಸಲಾಗಿದೆ. ಈ ಉಪಗ್ರಹಗಳ ಸ್ಥಿತಿಯನ್ನು ಸತತವಾಗಿ ಗಮನಿಸಿ, ನಿಯಂತ್ರಿಸಲು  ಭೂಮಿಯ ಮೇಲೆ ಹವಾಯಿ, ಅಸೆನೆಷನ್ ದ್ವೀಪ, ಡಿಯಾಗೋ ಗಾರ್ಷಿಯಾ, ಕ್ವಜಲೈನ್ ಮತ್ತು ಕೊಲೆರಡೋ ಸ್ಪ್ರಿಂಗ್ಸ್ ಎಂಬ ಐದು ಸ್ಥಳಗಳಲ್ಲಿ ಕಾರ್ಯತಾಣಗಳಿವೆ. ಇವು ಉಪಗ್ರಹಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಗಮನಿಸಿ, ಏನಾದರೂ ವ್ಯತ್ಯಯಗಳಿದ್ದರೆ ಆಯಾ ಉಪಗ್ರಹಗಳ ಗ್ರಾಹಕಕ್ಕೆ ಸಂದೇಶ ರವಾನಿಸುತ್ತವೆ. ಈ ಸಂದೇಶಗಳನ್ನು ಉಪಗ್ರಹಗಳು ಸೂಕ್ತವಾಗಿ ಬಳಸಿಕೊಳ್ಳುತ್ತವೆ.

ಪ್ರೆಸಿಡೆಂಟ್ ರೋನಾಲ್ಡ್ ರೀಗನ್‌ರವರು ೧೯೮೩ರಲ್ಲಿ ಈ ವ್ಯವಸ್ಥೆಯನ್ನು ನಾಗರಿಕ ಬಳಕೆಗೆ ಮುಕ್ತವಾಗಿ ತೆರೆದಿಡುವ ನಿರ್ಧಾರ ಮಾಡಿದರು. ಈಗಲೂ ಈ ಮಾನವ ನಿರ್ಮಿತ ಉಪಗ್ರಹಗಳ ಸಮೂಹದ ಮಾಲೀಕತ್ವ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಕ್ಷಣಾ ವಿಭಾಗದ್ದೇ ಆಗಿದೆ ಹಾಗೂ ಅದನ್ನು ನಿರ್ವಹಿಸುವ ಜವಾಬ್ದಾರಿಯನ್ನೂ ಅದು ವಹಿಸಿಕೊಂಡಿದೆ. ಪ್ರಪಂಚದ ಜನತೆಯೆಲ್ಲಾ ಇದಕ್ಕಾಗಿ ಅಮೆರಿಕದ ರಕ್ಷಣಾ ವಿಭಾಗಕ್ಕೆ ಕೃತಜ್ಞರಾಗಿರಬೆಕು. ಇದಲ್ಲದೆ ರಶ್ಯಾ ‘ಗ್ಲೊನಾಸ್’ (GLONASS) ಎಂಬ ಜಿಪಿಎಸ್ ವ್ಯವಸ್ಥೆಯನ್ನೂ, ಯೂರೋಪಿಯನ್ ಯೂನಿಯನ್ ‘ಗೆಲಿಲಿಯೋ’ ಎಂಬ ಜಿಪಿಎಸ್ ವ್ಯವಸ್ಥೆಯನ್ನೂ ನಿರ್ವಹಿಸುತ್ತಿವೆ. ಭಾರತ ಸರ್ಕಾರವೂ ಕೂಡ ೨೦೧೧ರ ವೇಳೆಗೆ ಭಾರತದ ಅಂತರಿಕ್ಷದಲ್ಲಿ ಯಾನದರ್ಶಿ ವ್ಯವಸ್ಥೆಯೊಂದನ್ನು ರೂಪಿಸುವ ಉದ್ದೇಶ ಹೊಂದಿದೆ. ೨೦೦೮ರಿಂದ ಏರ‍್ಪೋರ್ಟ್ ಅಥಾರಟಿ ಆಫ್ ಇಂಡಿಯಾ ಮತ್ತು ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಜಂಟಿಯಾಗಿ ಈ ಯೋಜನೆಯಲ್ಲಿ ಭಾಗವಹಿಸುತ್ತಿವೆ. ಈ ಯೋಜನೆಗೆ `GAGAN’ ಎಂದು ಹೆಸರಿಸಲಾಗಿದೆ. ‘ಜಿಪಿಎಸ್ ಏಡೆಡ್ ಜಿಯೋ ಆಗ್‌ಮೆಂಟೆಡ್ ನಾವಿಗೇಷನ್ ಸಿಸ್ಟಮ್’ ಎಂಬುದರ ಸಂಕ್ಷಿಪ್ತ ರೂಪವಾದ ‘ಗಗನ್’ ನಮ್ಮ ಭಾಷೆಯಲ್ಲಿಯೂ ‘ಗಗನ’ ಎಂದು ಅಂತರಿಕ್ಷದತ್ತ ಬೆರಳು ತೋರುತ್ತಿರುವುದು ಸೂಕ್ತವಾಗಿದೆ.

ಜಿಪಿಎಸ್ ಲೆಕ್ಕಾಚಾರ ಹೇಗೆ?
ಜಿಪಿಎಸ್ ಉಪಗ್ರಹ ಸಮೂಹದಿಂದ ಪ್ರತಿಯೊಂದು ಉಪಗ್ರಹವೂ ಸತತವಾಗಿ ಸಂದೇಶವನ್ನು ಕಳುಹಿಸುತ್ತಿರುತ್ತದೆ. ಸಂದೇಶದಲ್ಲಿ-ಸಂದೇಶವನ್ನು ಕಳುಹಿಸಿದ ಸಮಯ, ಆ ಉಪಗ್ರಹದ ಸ್ಥಾನ. ಉಪಗ್ರಹ ಸಮೂಹದಲ್ಲಿರುವ ಇತರ ಉಪಗ್ರಹಗಳ ಸ್ಥಾನಗಳು ಮತ್ತು ಅವುಗಳ ಆರೋಗ್ಯ ಸ್ಥಿತಿ-ಇತ್ಯಾದಿ ವಿವರಗಳಿರುತ್ತವೆ. ಸಂಕೇತ ರೂಪದಲ್ಲಿ ಭೂಮಿಗೆ ಧಾವಿಸುವ ಈ ವಿವರಗಳು ಬೆಳಕಿನ ವೇಗದಲ್ಲಿ ಪಯಣಿಸುತ್ತಾ, ನೀರು, ಗಾಳಿ, ಆಕಾಶ ಎಂದು ಲೆಕ್ಕಿಸದೆ ಭೂಮಿಗೆ ತಲುಪುತ್ತವೆ. ಭೂಮಿಯ ವಾತಾವರಣದ ಮೂಲಕ ಹಾದು ಬರುವಾಗ ಮಾತ್ರ ವೇಗ ಸ್ವಲ್ಪ ತಗ್ಗುತ್ತದೆ. ಭೂಮಿಯ ಮೇಲಿರುವ ಯಾವುದೇ ಗ್ರಾಹಕ ಏಕಕಾಲದಲ್ಲಿ ಮೂರು ಉಪಗ್ರಹಗಳಿಂದ ಬರುವ ಸಂಕೇತಗಳನ್ನು ಸ್ವೀಕರಿಸುವಂತೆ ಉಪಗ್ರಹಗಳು ನಿರ್ದಿಷ್ಟ ದೂರದಲ್ಲಿ ಹಾರಡುತ್ತಿರುತ್ತವೆ. ನಿರ್ದಿಷ್ಟ ಸಮಯದಲ್ಲಿ ಈ ಸಂಕೇತಗಳನ್ನು ಭೂಮಿಯ ಮೇಲಿರುವ ಗ್ರಾಹಕವು ಸ್ವೀಕರಿಸುತ್ತದೆ. ಸಂದೇಶವನ್ನು ಸ್ವೀಕರಿಸಿದ ನಂತರ ಭೂಮಿಯ ಮೇಲೆ ಸ್ಥಾನದ ನಿರ್ದೇಶಾಂಕಗಳನ್ನು(co-ordinates) ಗಳನ್ನು ಗುರುತಿಸಲು ಸಾಕಷ್ಟು ಕ್ಲಿಷ್ಟಕರವಾದ ಗಣಿತವನ್ನು ಮಾಡಬೇಕು. ಇದಕ್ಕೆ ಗಣಿತ ವಿಜ್ಞಾನದ ಜ್ಯಾಮಿತಿ ವಿಭಾಗದ ತ್ರಿಪಾರ್ಶ್ವೀಕರಣ (ಟ್ರೈಲಾಟೆರೇಷನ್) ಎಂಬ ವಿಧಾನದಲ್ಲಿ ತ್ರಿಕೋಣದ ಗುಣಗಳ ಹಲವು ಸೂತ್ರಗಳನ್ನು ಬಳಸಲಾಗುತ್ತದೆ. ಇದಕ್ಕೆ ತ್ರಿಕೋಣೀಕರಣ (ಟ್ರೈಯಾಂಗ್ಯುಲೇಷನ್) ಎಂದು ಕರೆಯುವ ವಾಡಿಕೆಯೂ ಇದೆ ಆದರೆ ಸಾಮಾನ್ಯ ಬಳಕೆದಾರರಿಗೆ ಈ ಕಷ್ಟವಿರುವುದಿಲ್ಲ. ಏಕೆಂದರೆ ಗ್ರಾಹಕದಲ್ಲಿ ಕಂಪ್ಯೂಟರ್‌ನಂತೆಯೇ ಇರುವ ಒಂದು ಘಟಕ ಎಲ್ಲಾ ಲೆಕ್ಕಾಚಾರಗಳನ್ನೂ ಸ್ವಯಂಚಾಲಿತವಾಗಿ ಮಾಡಿ ಅಕ್ಷಾಂಶ, ರೇಖಾಂಶ ಮತ್ತು ಭೂಮಟ್ಟದಿಂದ ಇರುವ ಎತ್ತರ ಇತ್ಯಾದಿಗಳನ್ನು ಒದಗಿಸುತ್ತದೆ.. ಇಷ್ಟಾದರೂ ಏನಾದರೂ ತಪ್ಪಾಗಿದ್ದಲ್ಲಿ ಅದನ್ನು ಸರಿ ಪಡಿಸಲು ಮತ್ತಷ್ಟು ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಇದಕ್ಕೆ ನಾಲ್ಕನೆಯ ಉಪಗ್ರಹದಿಂದ ಬರುವ ಸಂಕೇತವನ್ನು ಬಳಸಿಕೊಳ್ಳಲಾಗುತ್ತದೆ.

ವಿವಿಧೋಪಯೋಗಿಜಿಪಿಎಸ್

ವೈಜ್ಞಾನಿಕ
ಈ ವ್ಯವಸ್ಥೆಯು ಮಿಲಿಟರಿ ಕ್ಷೇತ್ರದಿಂದ ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶವಾಗುತ್ತಿದ್ದಂತೆಯೇ ಅದರ ಬಳಕೆಯೂ ಜಾಸ್ತಿಯಾಯಿತು. ಭೂಪಟ ತಯಾರಿಕೆಗೆ, ಭೂಮಾಪನ ಕಾರ್ಯಗಳಿಗೆ, ಭೂಖಂಡಗಳ ಚಲನೆಯ ಅಧ್ಯಯನಕ್ಕೆ, ಭೂಕಂಪನಗಳ ಅಧ್ಯಯನಕ್ಕೆ, ಹವಾಮಾನ ಮುನ್ಸೂಚನೆಗೆ, ಪರ್ವತಾರೋಹಣ ಇತ್ಯಾದಿ ಸಾಹಸ ಕಾರ್ಯಗಳಿಗೆ ಜಿಪಿಎಸ್ ನಿಂದ ದೊರೆತ ನೆರವು ಅಪಾರ. ಅಭಿವೃದ್ಧಿಯಾದಂತೆಲ್ಲಾ ಒಂದು ಸ್ಥಳವನ್ನು ಕೆಲವು ಮೀಟರ್ ಅಲ್ಲ ಕೆಲವು ಸೆಂಟಿಮೀಟರ್‌ನಷ್ಟು ನಿಖರವಾಗಿ ಗುರುತಿಸಲೂ ಸಾಧ್ಯವಾಯಿತು! ವಿಮಾನ ಹಾಗೂ ಸಮುದ್ರಯಾನಗಳಲ್ಲಿ, ಜಿಪಿಎಸ್ ಗ್ರಾಹಕದಲ್ಲಿ ಭೂಮಿಯ ಅಕ್ಷಾಂಶ ರೇಖಾಂಶಗಳ ವಿವರ ತುಂಬಿಸಿ, ಸೂಕ್ತ ತಂತ್ರಾಂಶಗಳನ್ನು ಅಳವಡಿಸಿದರೆ, ಪ್ರಯಾಣಿಕರ ಮುಂದೆ ಇರುವ ಕಂಪ್ಯೂಟರ್ ಪರದೆಯ ಮೇಲೆ ವಾಹನ ಸಾಗುತ್ತಿರುವ ಸ್ಥಳದ ನಿಖರವಾದ ವಿವರಗಳು ಪ್ರದರ್ಶಿತವಾಗುತ್ತದೆ.

ವಾಣಿಜ್ಯ

ಸಾಮಾನುಗಳನ್ನು ನಿರ್ದಿಷ್ಟ ಸ್ಥಳಕ್ಕೆ ತಲುಪಿಸುವ ಸಂಸ್ಥೆಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿವೆ. ತುರ್ತು ಪರಿಸ್ಥಿತಿಯಲ್ಲಿ ಅಂದರೆ ರಸ್ತೆ ಅಪಘಾತಗಳಾದಾಗ, ಅಗ್ನಿ ಅನಾಹುತಗಳಾದಾಗ ಸಹಾಯಕ್ಕೆ ಧಾವಿಸುವ ವಾಹನಗಳು ಸುಲಭವಾಗಿ ನಿಖರವಾಗಿ ಆ ಜಾಗವನ್ನು ತಲುಪವುದು ಸಾಧ್ಯವಾಗಿದೆ. ಕೆಲವು ದೊಡ್ಡ ನಗರಗಳಲ್ಲಿನ ಟಾಕ್ಸಿ ಸಂಸ್ಥೆಯವರು ತಮ್ಮ ವಾಹನಗಳ ಮೇಲೆ ನಿಗಾ ವಹಿಸಲು ಈ ಸಾಧನವನ್ನು ಬಳಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿಯೂ ಇದನ್ನು ಟ್ರಾಕ್ಟರುಗಳಲ್ಲಿ ಅಳವಡಿಸಿ ಭೂಮಿಯನ್ನು ಉಳುವಾಗ ಟ್ರಾಕ್ಟರ್ ನೇರವಾಗಿ ಚಲಿಸುವಂತೆ ಮಾಡಲಾಗುತ್ತಿದೆ.
ಪ್ರಪಂಚದಲ್ಲಿ ಸಂಪರ್ಕ ವ್ಯವಸ್ಥೆಯು ಮುಂದುವರಿದು ದೇಶಗಳ ಮಧ್ಯೆ ಪರಸ್ಪರ ಸಂಬಂಧಗಳು ಹೆಚ್ಚಿ ಸಾರಿಗೆಯೂ ಅಭಿವೃದ್ಧಿಯಾಗಿರುವಾಗ ವಿವಿಧ ದೇಶಗಳ ಸಮಯ ಏಕಕಾಲಿಕವಾಗುವುದು ಅನಿವಾರ್ಯ. ಇಂತಹ ಕೆಲಸಕ್ಕೂ ಮನುಕುಲಕ್ಕೆ ನೆರವಾಗುತ್ತಿದೆ ಈ ಜಿಪಿಎಸ್. ಭೂಮಿಯ ಮೇಲಿರುವ ಪ್ರತಿಯೊಂದು ಗ್ರಾಹಕವನ್ನೂ ಕೂಡ ಒಂದು ಪರಮಾಣು ಗಡಿಯಾರವೆಂದು ಭಾವಿಸಬಹುದು. ಖಗೋಳದ ಅಧ್ಯಯನಕ್ಕೆ ಇದು ಬಹಳ ಸಹಾಯಕವಾಗಿದೆ. ಕಂಪ್ಯೂಟರ್ ಜಾಲಗಳು, ಸಂಪರ್ಕ ವ್ಯವಸ್ಥೆಗಳು, ರೇಡಿಯೋ ಮತ್ತು ದೂರದರ್ಶನ ಕೇಂದ್ರಗಳು, ಬ್ಯಾಂಕ್ ಮತ್ತು ಬಹುರಾಷ್ಟ್ರೀಯ ಕಂಪನಿಗಳು ನಿಖರವಾದ ಸಮಯವನ್ನು ಗುರುತಿಸುವ ನಿಟ್ಟಿನಲ್ಲಿ ಜಿಪಿಎಸ್ ವ್ಯವಸ್ಥೆಯಿಂದ ಬಹಳ ಪ್ರಯೋಜನವನ್ನು ಪಡೆಯುತ್ತಿವೆ.

ದಿನನಿತ್ಯ ಜೀವನ

ಇತ್ತೀಚಿಗೆ ಕಣ್ಣು ರೆಪ್ಪೆ ಮಿಟಿಕಿಸುವಷ್ಟರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಬೆಳವಣಿಗೆಯಾಗಿ, ಅದರ ಫಲ ಸಾಮಾನ್ಯ ಮನುಷ್ಯನಿಗೂ ಕೂಡ ಸಿಕ್ಕುತ್ತಿರುವುದು ಗಮನಾರ್ಹ. ಹಲವಾರು ದೇಶಗಳಲ್ಲಿ ಈಗ ಕಾರುಗಳಲ್ಲಿ ಜಿಪಿಎಸ್ ಬಳಕೆ ಸಾಮಾನ್ಯವಾಗುತ್ತಿದೆ. ಭಾರತದಲ್ಲಿಯೂ ದೊಡ್ಡ ನಗರಗಳಲ್ಲಿ ಕೆಲವರು ಇದನ್ನು ಬಳಸುತ್ತಿದ್ದಾರೆ. ಆದರೂ ಇಲ್ಲಿ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಿ ಅಂಗಡಿಯಲ್ಲೋ, ಓಡಾಡುತ್ತಿರುವ ಜನರನ್ನೋ ದಾರಿ ಕೇಳುವ ರೂಢಿ ಇರುವುದರಿಂದ ಅನೇಕರಿಗೆ ಜಿಪಿಎಸ್ ಅಗತ್ಯ ಕಂಡುಬಂದಿಲ್ಲ. ಆದರೆ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಿಪಿಎಸ್‌ನ ಅಗತ್ಯ ಹೆಚ್ಚಾಗಬಹುದು. ಭಾಷೆ ಬಾರದಿರುವ ವಿದೇಶಿ ಪ್ರವಾಸಿಗರಿಗೆ ಇದು ಉಪಯುಕ್ತ. ಆಟೋ ಅಥವಾ ಟಾಕ್ಸಿಯಲ್ಲಿ ಇದನ್ನು ಅಳವಡಿಸಿದರೆ ಚಾಲಕರು ಪ್ರವಾಸಿಗರಿಗೆ, ಪ್ರಯಾಣಿಕರಿಗೆ ದಾರಿ ತಪ್ಪಿಸುವ ಅವಕಾಶಗಳೇ ಇರುವುದಿಲ್ಲ. ಆದರೆ ಇದಕ್ಕೆ ಪೂರಕವಾದ ನಕ್ಷೆಗಳು ಸಿದ್ಧವಾಗುವುದು ಅಗತ್ಯ. ಭಾರತದಲ್ಲಿ ಈಗ satnavtech ಎಂಬ ಸಂಸ್ಥೆ ನಕ್ಷೆಗಳು ಹಾಗೂ ತಂತ್ರಾಂಶಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದೆ. ಭಾರತ, ಅಮೆರಿಕ, ಜರ್ಮನಿ ಇತ್ಯಾದಿ ದೇಶಗಳ ನಕ್ಷೆಗಳನ್ನು ಒದಗಿಸುತ್ತಿರುವುದರಿಂದ ಅಲ್ಲಿಂದ ಇಲ್ಲಿಗೆ ಬಂದವರಿಗೆ ಹಾಗೂ ಇಲ್ಲಿಂದ ಅಲ್ಲಿಗೆ ಹೋಗುವವರಿಗೆ ಉಭಯತ್ರರಿಗೂ ಇವು ಉಪಯುಕ್ತವೇ ಆಗಿವೆ. ದೆಹಲಿಯಲ್ಲಿರುವ ‘ಮಾಪ್ ಮೈ ಇಂಡಿಯಾ’ ಎಂಬ  ಸಂಸ್ಥೆಯೂ ಭಾರತದಲ್ಲಿ ಸುಮಾರು ೪೦೦ ನಗರಗಳ ನಕ್ಷೆಗಳನ್ನು ಒಳಗೊಂಡಿರುವ ಜಿಪಿಎಸ್ ರೀಸೀವರ್ ಬಿಡುಗಡೆ ಮಾಡಿದೆ(೨೦೦೮-ಜೂನ್). ಇದನ್ನು ಬಹಳ ಸುಲಭವಾಗಿ ಕಾರಿನಲ್ಲಿ ಅಳವಡಿಸಿಕೊಳ್ಳಬಹುದು. ಇದು ಆಗಿಂದಾಗ್ಯೆ ನಗರಗಳಲ್ಲಿ ಉಂಟಾಗುವ ಬೆಳವಣಿಗೆಯನ್ನೂ ಗುರುತಿಸಿ ನಕ್ಷೆಗಳಲ್ಲಿ ಅಳವಡಿಸುತ್ತದೆ. ಮುಂದೊಂದು ದಿನ ನಮ್ಮ ದೇಶದಲ್ಲಿ ಮೊಬೈಲ್ ಫೋನ್ ತರಹ ಜಿಪಿಎಸ್ ಕೂಡ ಸರ್ವೇ ಸಾಮಾನ್ಯವಾಗಿ ಬಳಕೆಯಾಗುವ ವಸ್ತುವಾದರೆ ಆಶ್ಚರ್ಯವೇನಿಲ್ಲ.

ಹೀಗೆ ಜಿಪಿಎಸ್ ಸಾಮಾನ್ಯವಾದ ಬಳಕೆಯ ಸಾಧನವಾದಾಗ ಅದರ ಬೆಲೆ, ಗಾತ್ರ, ರೂಪ ಎಲ್ಲವೂ ಬದಲಾಗಬೇಕಾದದ್ದು ಅಗತ್ಯವಾಯಿತು. ಈಗ ಕೈಗಡಿಯಾರಗಳಲ್ಲಿ ಬೀಗದ ಕೈ ಗೊಂಚಲಿನಲ್ಲಿ ಜಿಪಿಎಸ್ ಅಳವಡಿಸಲಾಗುತ್ತಿದೆ. (ಆದರೆ ಇದರ ಜೊತೆ ಸೂಕ್ತವಾದ ಮೊಬೈಲ್ ದೂರವಾಣಿ ಅವಶ್ಯಕ.) ಉಪಗ್ರಹಗಳಲ್ಲಿ ಅತಿ ನಿಖರತೆಯ ಪರಮಾಣು ಗಡಿಯಾರಗಳಿರುತ್ತವೆ. ಆದರೆ ಸಾರ್ವಜನಿಕ ಬಳಕೆಯಲ್ಲಿ ಇಂತಹ ಗಡಿಯಾರಗಳನ್ನು ಬಳಸುವುದು ಗಾತ್ರದ ದೃಷ್ಟಿಯಿಂದಲೂ, ಬೆಲೆಯ ದೃಷ್ಟಿಯಿಂದಲೂ ಸಾಧ್ಯವಿಲ್ಲದ ವಿಷಯ. ಇದಕ್ಕೆ ಪರಿಹಾರವಾಗಿ ಗ್ರಾಹಕಗಳಲ್ಲಿ ಸ್ಫಟಿಕ ಗಡಿಯಾರಗಳನ್ನು ಅಳವಡಿಸಿ ಕೆಲವು ತಿದ್ದುಪಡಿಗಳನ್ನು ಅಳವಡಿಸಲಾಗುತ್ತಿದೆ.

ಜಿಪಿಎಸ್ ಗ್ರಾಹಕದಿಂದ ಜನರ ಚಲನವಲನವನ್ನೂ ಗಮನಿಸುವುದು ಸಾಧ್ಯವಾಗಿದೆ. ಮರೆವು ರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಇದನ್ನು ಧರಿಸಿದರೆ ಅವರ ಮೇಲೆ ನಿಗಾ ವಹಿಸುವುದು ಸಾಧ್ಯ. ವಿದೇಶವೊಂದರಲ್ಲಿ ಮರೆವು ರೋಗದಿಂದ ಬಳಲುತ್ತಿರುವ ವಯಸ್ಸಾದ ತನ್ನ ತಂದೆಗೆ ಸಂಕೇತ ರವಾನಿಸುವ ಉಪಕರಣವನ್ನು ಕಟ್ಟಿ ಆತ ಮನೆಯಲ್ಲಿದ್ದರೂ ಹೊರಗೆ ಹೋದರೂ ಕಂಪ್ಯೂಟರ್ ಸಹಾಯದಿಂದ ತನ್ನ ಕೆಲಸದ ಸ್ಥಳದಿಂದಲೇ ಅವರ ಚಲನವಲನಗಳನ್ನು ಗಮನಿಸುವುದು ಸಾಧ್ಯವಾಗಿದೆ ಎನ್ನುತ್ತಾನೆ ಆತನ ಮಗ. ಸಾಕು ನಾಯಿಗಳಿಗೆ ಇಂತಹ ಉಪಕರಣವನ್ನು ಕಟ್ಟಿದರೆ, ಅದು ಎಲ್ಲಿದೆ ಎಂದು ತಿಳಿದುಕೊಳ್ಳಬಹುದಂತೆ. ಇದು ಕೇವಲ ನಾಯಿಗೇ ಏಕೆ ನಿಮ್ಮ ಮಗುವಿಗೂ ಕಟ್ಟಬಹುದೆಂಬುದು ಮತ್ತೊಂದು ಸಲಹೆ. ಇದೇ ವಾದವನ್ನು ಮುಂದುವರಿಸಿ ದೊಡ್ಡ ಮಕ್ಕಳಿಗೂ, ಗಂಡ ಹೆಂಡತಿಯರಿಗೂ ವಿಸ್ತರಿಸಬಹುದುಲ್ಲವೇ? ಆದರೆ ಇಲ್ಲಿ ಉಪಕರಣವನ್ನು ಧರಿಸಿರುವವರು ಅದನ್ನು ಕಿತ್ತೊಗೆಯಬಹುದೆಂಬುದನ್ನು ಮರೆಯದಿರಿ. ಅದಕ್ಕಾಗಿ ಕೆಲವು ವಿದೇಶಿ ಕಂಪನಿಗಳು ಅದನ್ನು ಧರಿಸುವವರಿಗೂ ಗೊತ್ತಾಗದಂತೆ ಉಡುಪಿನಲ್ಲಿ ಅತಿ ಸೂಕ್ಷ್ಮವಾದ ಸಂವೇದಕಗಳನ್ನು ಅಳವಡಿಸುವುದರಲ್ಲಿ ಯಶಸ್ವಿಯಾಗಿವೆಯಂತೆ!

ಮತ್ತೊಂದು ಕುತೂಹಲಕಾರಿ ವಿಷಯ. ಮೌಂಟ್ ಎವೆರೆಸ್ಟ್‌ನ ಎತ್ತರವನ್ನು ಹಲವರು ಮುಂಚೆಯೇ ಅಳೆದಿದ್ದರೂ ಜಿಪಿಎಸ್ ಗ್ರಾಹಕವನ್ನು ಬಳಸಿ ಅಳೆದ ನಂತರ ಅದಕ್ಕೆ ಮತ್ತಷ್ಟು ಪುಷ್ಟಿ ದೊರೆಯಿತು. ಅಲ್ಲದೆ ಕುಂಬು ಹಿಮನದಿಯು ಎವರೆಸ್ಟ್ ಕಡೆಗೆ ಹರಿದಂತೆಲ್ಲಾ ಪರ್ವತವು ಎತ್ತರವಾಗಿ ಬೆಳೆಯುತ್ತಿರುವುದು ಬೆಳಕಿಗೆ ಬಂತು.

ಜಿಯೋ ಕ್ಯಾಚಿಂಗ್ ಎಂಬ ಸಾಹಸ ಕ್ರೀಡೆ

ಈಗ ಜಿಪಿಎಸ್ ಗ್ರಾಹಕವನ್ನು ಸಾಹಸ ಕ್ರೀಡೆಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಉನ್ನತ ತಾಂತ್ರಿಕತೆಯನ್ನು ಕಣ್ಣಾಮುಚ್ಚಾಲೆ ಆಟಕ್ಕಾಗಿ ಬಳಸಿಕೊಳ್ಳುವ ಪರಿ ಹೀಗಿದೆ. ಕೆಲವು ಸಂಸ್ಥೆಗಳು ವಾರಾಂತ್ಯಗಳಲ್ಲಿ ‘ಟ್ರೆಷರ್ ಹಂಟ್’ ಆಟದಂತೆಯೇ ಇರುವ ‘ಜಿಯೋ ಕ್ಯಾಚಿಂಗ್’ ಆಟವನ್ನು ಏರ್ಪಡಿಸುತ್ತವೆ. ಸಂಕೇತ ರವಾನಿಸುವ ಒಂದು ಉಪಕರಣವನ್ನು ಗುಪ್ತವಾಗಿಡಲಾಗುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವವರು ಅದರಿಂದ ಹೊರಹೊಮ್ಮುವ ಸಂಕೇತಗಳನ್ನು ತಮ್ಮ ಜಿಪಿಎಸ್ ರಿಸೀವರ್ ಮೂಲಕ ಗ್ರಹಿಸಿ ಆ ಜಾಗಕ್ಕೆ ತಲುಪುವುದೇ ಆಟದ ಕ್ರಮ. ಗುಪ್ತಸ್ಥಳ ತಲುಪಿದ ಸಾಹಸಿಗಳಿಗೆ ಅಲ್ಲಿ ಚಿಕ್ಕ ಕೊಡುಗೆಗಳೂ ಇರುತ್ತವೆ. ಕೊಡುಗೆಯೊಂದನ್ನು ತೆಗೆದುಕೊಂಡು, ಅಲ್ಲಿರುವ ಪುಸ್ತಕದಲ್ಲಿ ಸ್ವವಿವರಗಳನ್ನು ದಾಖಲಿಸಿದರೆ ಅವರು ಆಟದಲ್ಲಿ ಗೆದ್ದಂತೆ. ಅನಂತರ ಮತ್ತಷ್ಟು ಜನ ಆ ಜಾಗವನ್ನು ತಲುಪಲು ಸಾಧ್ಯವಾಗುವಂತೆ ಎಲ್ಲವನ್ನೂ ಅದೇ ಸ್ಥಿತಿಯಲ್ಲಿಡಬೇಕು. ಮೋಜಿನ ಆಟಗಾರರು ನೂರಾರು ಮೈಲಿ ಬೆಟ್ಟಗುಡ್ಡಗಳೆನ್ನದೆ ಅಲೆದಾಡಿ ಗುಪ್ತಸ್ಥಾನವನ್ನು ಕಂಡು ಹಿಡಿಯುತ್ತಾರೆ! ಆಟವನ್ನು ರೂಪಿಸುವವರು, ಅದಕ್ಕೆ ಅಗತ್ಯವಾದ ಉಪಕರಣಗಳನ್ನು ಮಾರಾಟ ಮಾಡುವವರು ಕುಳಿತಲ್ಲಿಯೇ ಹಣ ಸಂಪಾದಿಸುತ್ತಾರೆ!
ಆದರೆ ಕಳೆದ ವರ್ಷ ಎಂದರೆ ೨೦೦೮ರಲ್ಲಿ ಮುಂಬಯಿ ತಾಜ್ ಹೋಟಲಿನ ಮೇಲೆ ದಾಳಿ ಮಾಡಿದ ಉಗ್ರರೂ ಕೂಡ ಜಿಪಿಎಸ್ ಗ್ರಾಹಕದ ಪ್ರಯೋಜನ ಪಡೆದುಕೊಂಡಿದ್ದರೆಂಬುದನ್ನು ನೆನಪು ಮಾಡಿಕೊಳ್ಳಬಹುದು. ವಿಜ್ಞಾನದ ಯಾವುದೇ ಆವಿಷ್ಕಾರಕ್ಕೂ ಇಂತಹ ಕಪ್ಪು ಚುಕ್ಕೆ ತಪ್ಪಿದ್ದಲ್ಲ.

ಜಿಪಿಎಸ್ ಬಗ್ಗೆ ಇಷ್ಟೆಲ್ಲಾ ಹೇಳಿದ ನಂತರ ಒಂದು ಕತೆ ನೆನಪಾಗುತ್ತಿದೆ. ಅದರ ಕರ್ತೃ ಯಾರೆಂಬುದು ನೆನಪಿಗೆ ಬರುತ್ತಿಲ್ಲ. ಸಾರಾಂಶ ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. -ಇಬ್ಬರು ಸ್ನೇಹಿತರು ರಾತ್ರಿಯ ಕತ್ತಲಿನಲ್ಲಿ ಮನೆಗೆ ಬರುತ್ತಿರುತ್ತಾರೆ. ಅದರಲ್ಲಿ ಒಬ್ಬ ಕುರುಡ. ಸ್ನೇಹಿತ ಕುರುಡ ಮಿತ್ರನನ್ನು ಬಹಳ ಕಾಳಜಿಯಿಂದ ಕರೆತರುತ್ತಿರುತ್ತಾನೆ. ಇದ್ದಕ್ಕಿದ್ದಂತೆ ವಿದ್ಯುಚ್ಛಕ್ತಿ ಕಡಿತವಾಗಿ ಗಾಢಾಂಧಕಾರವಾಗುತ್ತದೆ. ಆಗ ಕಣ್ಣಿದ್ದ ಮಿತ್ರನೂ ಕುರುಡಾಗುತ್ತಾನೆ. ಆಗ ಕುರುಡ ತನ್ನ ಮಿತ್ರನಿಗೆ ಧೈರ್ಯವಾಗಿರುವಂತೆ ಹೇಳುತ್ತಾನೆ. ‘ನೀನು ಹೆದರಬೇಡ. ನನಗೆ ಈ ರಸ್ತೆಯಲ್ಲಿ ಸಾಗಲು ಅನೇಕ ಗುರುತುಗಳಿವೆ. ಸ್ವಲ್ಪ ದೂರ ನಡೆದ ನಂತರ ಒಬ್ಬರ ಮನೆಯಲ್ಲಿ ನಿತ್ಯಮಲ್ಲಿಗೆ ಹೂ ಅರಳುತ್ತಿರುತ್ತವೆ. ಅವುಗಳ ಪರಿಮಳ ಮೂಗಿಗೆ ಬಡಿಯುತ್ತಲೇ ಮುಂದೆ ಸುಮಾರು ನೂರು ಹೆಜ್ಜೆಗಳಾದ ನಂತರ ಒಂದು ಬಲ ತಿರುವಿನಲ್ಲಿ ತಿರುಗಬೇಕು. ಮುಂದೆ ಒಂದು ಸಣ್ಣ ಓಣಿ ಇದೆ. ಅಲ್ಲಿ ಒಬ್ಬ ಬೋಂಡಾ ಮಾರುವವನಿದ್ದಾನೆ. ಈರುಳ್ಳಿ ಬೋಂಡಾ ಕರಿದ ಘಮ ಯಾರಿಗೆ ಬರುವುದಿಲ್ಲ? ಆ ಓಣಿಯಲ್ಲಿ ಸಾಗಿದರೆ ಒಂದು ಮನೆಯಲ್ಲಿರುವ ನಾಯಿ ಮನೆ ಮುಂದೆ ಯಾರಾದರೂ ಹೋದರೆ ಸಾಕು, ಬೊಗಳುತ್ತದೆ. ಇಲ್ಲವೆ ಕುಯ್‌ಗುಡುತ್ತಿರುತ್ತದೆ. ಅಲ್ಲಿಂದ ಮೂರನೆಯ ಮನೆಯೇ ನನ್ನ ಮನೆ. ನೀನು ನನ್ನ ಕೈ ಹಿಡಿದುಕೋ ನನ್ನ ಮನೆಯವರೆಗೂ ನಿನ್ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು’ ಎಂದು ಹೇಳುತ್ತಾನೆ.- ಇಲ್ಲಿ ಇಂದ್ರಿಯಗಳು ಹಾಗೂ ಪರಿಸರವೇ ಕುರುಡನಿಗೆ ದಾರಿ ತೋರಿಸುತ್ತವೆ. ಇದೂ ಮನುಷ್ಯನ ಜಾಣ್ಮೆಯೇ   ಇಂದು ಅಪರಿಚಿತ ಪ್ರದೇಶದಲ್ಲಿಯೂ ನಿಖರವಾಗಿ ದಾರಿ ತೋರಲು ನಿಮಗೆ ಸಂಗಾತಿಯಂತಿರುವ ಜಿಪಿಎಸ್‌ನ ವಿನ್ಯಾಸ ಮಾಡಿರುವುದು ಮನುಷ್ಯನ ಬುದ್ಧಿವಂತಿಕೆಯ ಸಂಕೇತವಾಗಿದೆ. ಅತ್ಯುನ್ನತ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಹಕಾರದಿಂದ ಸಾಧಿಸಿಲಾಗಿರುವ ಭೌಗೋಳಿಕ ಸ್ಥಾನ ನಿರ್ದೇಶಕ ವ್ಯವಸ್ಥೆ ಮಾನವಕುಲದ ಮಹತ್ತರವಾದ ಸಾಧನೆಗಳಲ್ಲೊಂದಾಗಿದೆ.

ಜಿಪಿಎಸ್- ಹೆಚ್ಚುವರಿಮಾಹಿತಿ 

ಜಿಪಿಎಸ್ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಕಾಡುಗಳಲ್ಲಿ ಸಹ ಬಳಕೆಯಾಗುತ್ತದೆ. ಒಬ್ಬ ವನ್ಯಜೀವಿ ವಿಜ್ಞಾನಿಯ ಪ್ರಮುಖ ಪರಿಕರಗಳಲ್ಲಿ ಒಂದಾಗಿ ಬೆಳೆದಿದೆ, ಈ ಜಿಪಿಎಸ್. ಇದರಲ್ಲಿ ಅನೇಕ ಬಗೆಗಳು ಬಂದಿದ್ದು, ವನ್ಯಜೀವಿ ಸಂಶೋಧನೆಯಲ್ಲಿ ತೊಡಗಿದವರಿಗೆ ಪ್ರಯೋಜನಕಾರಿಯಾಗಿವೆ.ಬಹಳ ಮುಖ್ಯವಾದ ಉಪಯೋಗವೆಂದರೆ, ಹಿಂದೆ, ಹೊಸ ಪ್ರಭೇದದ ಅಥವಾ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಬೇಧ ಕಂಡಾಗ, ಕಂಡ ಸ್ಥಳದ ಅಕ್ಷಾಂಶ ಹಾಗೂ ರೇಖಾಂಶಗಳನ್ನು ಗುರುತಿಸಿಕೊಳ್ಳಲಾಗುತ್ತಿತ್ತು. ಈಗ ಜಿಪಿಎಸ್ ಬಂದ ನಂತರ ಜಿಪಿಎಸ್ ಕೋಆರ್ಡಿನೇಟ್ಸ್ ಸಂಖ್ಯೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೊಂದು ಹೊಸಾ ಹೆಜ್ಜೆ ವಿಜ್ಞಾನದಲ್ಲಿ. ಅಂತೆಯೇ, ಇನ್ನು ಅನೇಕ ಬಗೆಯ ಪ್ರಯೋಜನಗಳುಂಟು. ಉದಾಹರಣೆಗೆ, ಕಾಡಿನಲ್ಲಿ ಸಂಚರಿಸುವಾಗ ಮುಖ್ಯಸ್ಥಳಗಳನ್ನು ಇದರಲ್ಲಿ ಗುರುತಿಸಿದರೆ, ಹಿಂದಿರುಗುವಾಗ ಇದೇ ಹಾದಿ ತೋರುತ್ತದೆ! ಹಾದಿ ತಪ್ಪಿದಲ್ಲಿ ಬೀಪ್ ಬೀಪ್ ಶಬ್ದದ ಮೂಲಕ ಎಚ್ಚರಿಸುತ್ತದೆ! ಸದಾ ಕಾಡಿನಲ್ಲಿ ಸಂಚರಿಸುವ ಗಾರ್ಡ್‌ಗಳು ಸೇರಿದಂತೆ ಇತರೆ ಅರಣ್ಯ ಸಿಬ್ಬಂದಿಗೂ ಇದು ತುಂಬಾ ಉಪಕಾರಿ. ಕಾಡು ಪ್ರಾಣಿಗಳು ಅಟ್ಟಿಸಿಕೊಂಡು ಬಂದ ಸಂದರ್ಭದಲ್ಲಿ ಯದ್ವಾತದ್ವ ಓಡಿ ಪ್ರಾಣ ಉಳಿಸಿಕೊಂಡವರಿಗಂತೂ ದಾರಿ ಹುಡುಕಿ ನಗರ ಸೇರಲು ಇದೊಂದು ವರದಾನ!

ಜಿ.ಪಿ.ಎಸ್ ಸ್ಮಾರ್ಟ್ ಪೋನ್ ಗಳ ಹಲವು ತಂತ್ರಾಂಶಗಳಿಗಾಗಿ ಕೊಂಡಿ.

ಜಿ.ಪಿ.ಎಸ್  ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಷನ್‌ ಕೊಂಡಿ : https://play.google.com/store
ಜಿ.ಪಿ.ಎಸ್  ಐಪೋನ್  ಮೊಬೈಲ್ ಅಪ್ಲಿಕೇಷನ್‌ ಕೊಂಡಿ :  https://itunes.apple.com/us/app

ಚಿತ್ರ ಮತ್ತು ಮಾಹಿತಿ-ಕೃಪೆ ಅಂತರಜಾಲ.

Wednesday, November 14, 2012

ಹೊಸ ಪದ ತಂತ್ರಾಂಶ

ಕಂಪ್ಯೂಟರಲ್ಲಿ ಕನ್ನಡದ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತರಜಾಲದಲ್ಲಿ ಸದ್ಯಕ್ಕೆ ಕನ್ನಡ ವೆಬ್ ಸೈಟುಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಓದುಗರ ಸಂಖ್ಯೆ ಕಡಿಮೆ ಇಲ್ಲ. ಬಹಳಷ್ಟು ಜನ ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಬರೆಯಲು ಬಯಸುತ್ತಿದ್ದಾರೆ.
ಕೆಲವರು ಒತ್ತಕ್ಷರ, ದೀರ್ಘ, ಅಲ್ಪಪ್ರಾಣ, ಮಹಾಪ್ರಾಣ ಮುಂತಾದ ಟೈಪಿಂಗ್ ಸ್ವಲ್ಪ ಸಮಸ್ಯೆಯಾಗಿ ಹಿಂಜರಿಯುತ್ತಿದ್ದಾರೆ. ಆದರೂ ಕೂಡ ಉತ್ಸಾಹಿಗಳಿಗೇನೂ ಕಡಿಮೆ ಇಲ್ಲ. ಬಹಳ ಸುಲಭವಾಗಿ ನೇರವಾಗಿ ಎಲ್ಲಿ ಬೇಕಾದರೂ ಕನ್ನಡದಲ್ಲಿ ಬರೆಯಲು ಗೂಗಲ್, ಮೈಕ್ರೋಸಾಫ್ಟ್, ಪ್ರಮುಖ್ ಮುಂತಾದ ಹಲವು IME ಟೂಲ್ ಗಳಿವೆ. ನುಡಿ, ಪದ, ಬರಹದ IME ಜೊತೆಗೆ ಪದ ಸಂಸ್ಕಾರಕಗಳೂ (Word Processors) ಇವೆ.
ಆನ್ ಲೈನ್ ನಲ್ಲಿ ಬರೆಯಲು ಹಲವು ಟೂಲ್ ಗಳಿವೆ. ಸಾಮಾನ್ಯ ಬಳಕೆದಾರರಿಗೆ ಈಗ ಯಾವ ತಾಂತ್ರಿಕ ಸಮಸ್ಯೆ ಇಲ್ಲ. ಬೇಕಾಗಿರುವುದು ಸ್ವಲ್ಪ ಆಸಕ್ತಿ, ಅಭ್ಯಾಸ ಅಷ್ಟೆ. ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ 'ಬರಹ' ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ.
ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟುಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ. 'ನುಡಿ' ತಂತ್ರಾಂಶದಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ ಮತ್ತು ಡೌನ್ಲೋಡ್ ಮಾಡಲು ಬೇಕಾದ ತಾಣ ಈಗ ಇಲ್ಲ
ಈ ಸಂದರ್ಭದಲ್ಲಿ 'ಪದ' ತಂತ್ರಾಂಶದ ಹೊಸ ಆವೃತ್ತಿ (Pada 4.0) ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ಈ ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳಿವೆ.
ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೌಲಭ್ಯಗಳಿವೆ. ಮೊತ್ತಮೊದಲ ಬಾರಿಗೆ ಎರಡು ಲಕ್ಷಕ್ಕೂ ಹೆಚ್ಚು ಪದಗಳನ್ನುಳ್ಳ ನಿಘಂಟು ಕೂಡ ಇದರಲ್ಲಿದೆ. ಟೈಪಿಸಿದ ಕಡತಗಳನ್ನು ಹಲವು ರೀತಿಯಲ್ಲಿ ಉಳಿಸಲು(save as) ಅವಕಾಶವಿದೆ.
ಹಲವು ಬಗೆಯ ಅಕ್ಷರ ಶೈಲಿಗಳಿವೆ (Font styles). ಪದ ತಂತ್ರಾಂಶ ಅಳವಡಿಸಿಕೊಂಡಾಗ ಅದರ ಜೊತೆ ಪದ IME ಕೂಡ ಇರುತ್ತದೆ. ಇದನ್ನು ಆನ್ ಮಾಡಿಕೊಂಡು ವರ್ಡ್, ಎಕ್ಸೆಲ್ ಮುಂತಾದ ಯಾವುದೇ ಅಪ್ಲಿಕೇಶನ್ ಗಳಲ್ಲಿ ಹಾಗೂ ಇಮೇಲ್, ಚಾಟ್, ಫೇಸ್ ಬುಕ್, ಬ್ಲಾಗ್ ಮುಂತಾದ ಯಾವುದೇ ಅಂತರಜಾಲ ತಾಣಗಳಲ್ಲಿ ನೇರವಾಗಿ ಕನ್ನಡದಲ್ಲಿ ಟೈಪಿಸಬಹುದು. ಈ ತಂತ್ರಾಂಶ ಉಚಿತವಾಗಿ ದೊರೆಯುತ್ತದೆ. ಇದನ್ನು ಈ ತಾಣದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. http://www.pada.pro

ಇದರಲ್ಲಿರುವ ಸೌಲಭ್ಯಗಳು ಹೀಗಿವೆ.
1. ವಿಂಡೋಸ್ ಎಲ್ಲಾ ಆವೃತ್ತಿಗಳಲ್ಲೂ ಅಳವಡಿಸಿಕೊಳ್ಳಬಹುದು. (ಲಿನಕ್ಸ್ ಆವೃತ್ತಿ ಅಭಿವೃದ್ಧಿಗೊಳ್ಳುತ್ತಿದೆ)
2. ನಾಲ್ಕು ಬಗೆಯ ಕೀಬೋರ್ಡ್ ಆಯ್ಕೆ.
ಅ) ಫೊನೆಟಿಕ್
ಬ) ಫೊನೆಟಿಕ್ 2
ಕ) ನುಡಿ (ಕಗಪ)
ಡ) ಟ್ರಾನ್ಸ್ ಲಿಟೆರೇಶನ್
3. ಟೈಪಿಸುವಾಗ ಪದಗಳ ಸ್ವಯಂಪೂರ್ಣಗೊಳ್ಳುವಿಕೆ (Auto Complete).
4. ಕಡತಗಳನ್ನು plain text, rich text, HTML ರೀತಿಯಲ್ಲಿ ಉಳಿಸುವುದು ಮತ್ತು ಸಂಪಾದಿಸುವುದು.
5. ಪಿಡಿಎಫ್ ಕಡತದ ರಚನೆ. (Create PDF)
6. ಆನ್ ಲೈನ್ ವಿಕ್ಷನರಿಗೆ ಸಂಪರ್ಕ. (ಯಾವುದೇ ಪದದ ಮೇಲೆ ನೇರವಾಗಿ ರೈಟ್ ಕ್ಲಿಕ್ ಮಾಡಿ ವಿಕ್ಷನರಿಯಲ್ಲಿ ಅರ್ಥ ಹುಡುಕಬಹುದು)
7. ಪದಕೋಶ: ಎರಡು ಲಕ್ಷಕ್ಕೂ ಹೆಚ್ಚು ಪದಗಳಿರುವ ಆಫ್ ಲೈನ್ ನಿಘಂಟು.
8. ಹುಡುಕು ಮತ್ತು ಬದಲಿಸು (Find and Replace) ಸೌಲಭ್ಯ.
9. ಸ್ಪೆಲ್ ಚೆಕರ್ (Spell checker)
10. ಲಿಪಿ ಪರಿವರ್ತಕ (Font convert) - ಒಂದು ಭಾಷೆಯ ಲಿಪಿಯಿಂದ ಮತ್ತೊಂದಕ್ಕೆ ಪರಿವರ್ತನೆ ಹಾಗೂ ANSI ಇಂದ ಯುನಿಕೋಡ್ ಗೆ ಪರಿವರ್ತನೆ.
11. ಹಲವು ರೀತಿಯ ಅಕ್ಷರ ಶೈಲಿಗಳು (Font styles).
12. ಪದ IME : ಎಲ್ಲಿ ಬೇಕಾದರೂ ನೇರವಾಗಿ ಕನ್ನಡ ಟೈಪಿಸುವ ಎಂಜಿನ್.
13. ಅಕ್ಷರಗಳ ವಿವಿಧ ಗಾತ್ರ, ಬಣ್ಣ ಮತ್ತು ಹಿನ್ನೆಲೆಯ ಬಣ್ಣಗಳ ಸೌಲಭ್ಯ ಸೇರಿದಂತೆ ಇನ್ನೂ ಹಲವು formatting ಆಯ್ಕೆಗಳು.


ಪದ ತಂತ್ರಾಂಶದ ಇನ್ನೊಂದು ವಿಶೇಷವೆಂದರೆ ಬರಹ, ನುಡಿ ಮುಂತಾದ ತಂತ್ರಾಂಶಗಳಲ್ಲಿ ಉಳಿಸಿಟ್ಟಿರುವ ಯಾವುದೇ ಕಡತಗಳನ್ನು ನೇರವಾಗಿ ಇದರಲ್ಲಿ ತೆರೆಯಬಹುದು. ಅದು ಯುನಿಕೋಡ್ ಅಕ್ಷರಗಳಾಗಿ ತೆರೆದುಕೊಳ್ಳುತ್ತದೆ.
ಮತ್ತೊಂದು ವಿಶೇಷವೆಂದರೆ ಪದ ತಂತ್ರಾಂಶದ ಮೂಲಕ ರಚಿಸಿದ ಪಿಡಿಎಫ್ ಕಡತಗಳಲ್ಲಿ ಯಾವುದೇ ಪದವನ್ನು ಕೂಡ ಹುಡುಕಬಹುದು (find) ಹಾಗೂ ಪಿಡಿಎಫ್ ಕಡತದಲ್ಲಿರುವ ಪಠ್ಯವನ್ನು ಕಾಪಿ ಮಾಡಿ ಬೇರೆಡೆಗೆ ಪೇಸ್ಟ್ ಮಾಡಬಹುದು. ಯಾವುದೇ ಫಾಂಟ್ ಸಮಸ್ಯೆ ಉಂಟಾಗುವುದಿಲ್ಲ.
ಪದ ತಂತ್ರಾಂಶದ zipped version ಕೂಡ ಲಭ್ಯವಿದೆ. ಬಹುತೇಕ ಆಫೀಸ್ ಮುಂತಾದ ಕಡೆ ಗಣಕದಲ್ಲಿ ಯಾವುದೇ ತಂತ್ರಾಂಶ ಅಳವಡಿಸಿಕೊಳ್ಳಲು admin rights ಅಥವಾ permission ಇರುವುದಿಲ್ಲ. ಅಂತಹ ಕಡೆ ಈ zipped version ಇಟ್ಟುಕೊಂಡು ಕನ್ನಡದಲ್ಲಿ ಬರೆಯಬಹುದು. ನಮ್ಮ ಕಂಪ್ಯೂಟರಿನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಇಷ್ಟೆಲ್ಲಾ ಸೌಲಭ್ಯಗಳ ತಂತ್ರಾಂಶ ರಚಿಸಿ ಉಚಿತವಾಗಿ ಬಳಕೆಗೆ ದೊರೆಯುವಂತೆ ಮಾಡಿರುವ ತಂತ್ರಾಂಶ ಅಭಿವೃದ್ಧಿಗಾರರಾದ ಲೋಹಿತ್ ಶಿವಮೂರ್ತಿಯವರಿಗೆ ಧನ್ಯವಾದಗಳು.

ಡೌನ್ ಲೋಡ್ ಮಾಡಿಕೊಳ್ಳುವ ತಾಣ: http://www.pada.pro/download

Saturday, November 3, 2012

ಮೊಬೈಲ್ ಮಾತು

 ನಮ್ಮ ದೇಶದ ಶೇಕಡ ೭೦ರಷ್ಟು ಜನರಲ್ಲಿ ಈಗ ಮೊಬೈಲ್ ಮತ್ತು ಸ್ಥಿರ ದೂರವಾಣಿ ಸಂಪರ್ಕ ಇದೆ. ಸರಕಾರದ ಬಿಎಸ್‌ಎನ್‌ಎಲ್ ಜೊತೆ ಹಲವಾರು ಖಾಸಗಿ ಕಂಪೆನಿಗಳು ಕೂಡ ಸೇವೆ ನೀಡುತ್ತಿವೆ. ಒಬ್ಬರಿಂದೊಬ್ಬರು ಜಿದ್ದಿಗೆ ಇಳಿದವರಂತೆ ನೂರಾರು ನಮೂನೆಯ ಮತ್ತು ಬೆಲೆಯ ಸೇವೆಗಳನ್ನು ನೀಡುತ್ತಿವೆ. ಹಾಗೂ ಪ್ರ್ರತಿದಿನ ಹೊಸಹೊಸ ಸ್ಕೀಮ್‌ಗಳ ಘೋಷಣೆ ಮಾಡುತ್ತಿರುತ್ತವೆ. ಯಾವ ಕಂಪೆನಿಯ ಯಾವ ಸ್ಕೀಮ್ ಕೊಂಡರೆ ನಿಮ್ಮ ಅಗತ್ಯಕ್ಕೆ ಸರಿಹೊಂದುತ್ತದೆ ಮತ್ತು ನಿಮಗೆ ಅತ್ಯಧಿಕ ಉಪಯೋಗ ಆಗುತ್ತದೆ ಎಂದು ತಿಳಿಯುವುದು ಹೇಗೆ? ಈ ಸಮಸ್ಯೆಗೆ ಪರಿಹಾರವೆಂಬಂತೆ telecomtalk.info ಜಾಲತಾಣವಿದೆ.

ಸಿಂಪಲ್.ಕಾಂ ಎನ್ನುವ ಬ್ಯಾಂಕು

 ಸಿಂಪಲ್.ಕಾಂ ಎನ್ನುವ ತಾಣವು ಶುಲ್ಕರಹಿತವಾಗಿ ಬ್ಯಾಂಕ್ ಸೇವೆಗಳನ್ನು ಗ್ರಾಹಕರಿಗೆ ನೀಡುವ ಗುರಿಯೊಂದಿಗೆ ಕೆಲಸ ಮಾಡಲಿದೆ.ಸಿಂಪಲ್ ತಾಣದ ಮೂಲಕ ಉಳಿತಾಯ ಮಾಡುವುದು,ಖರ್ಚು ಮಾಡುವುದು ಮತ್ತು ಆಯವ್ಯಯದ ಲೆಕ್ಕ ತಿಳಿಯುವುದು ಸುಲಭವಾಗಲಿದೆ.ಅಂದ ಹಾಗೆ ಸಿಂಪಲ್ ತಾಣವು ಸದ್ಯ ಕೆಲಸ ಮಾಡುತ್ತಿರುವ ಬ್ಯಾಂಕುಗಳ ನೆರವು ಪಡೆದೇ ಬ್ಯಾಂಕ್ ಸೇವೆ ನೀಡುತ್ತದಾದರೂ,ಗ್ರಾಹಕನಿಗೆ ತನ್ನ ಸೇವೆ ಉಚಿತವಾಗಿಯೇ ನೀಡಲಿದೆ.ಬ್ಯಾಂಕುಗಳಿಗೆ ಹೊರಗುತ್ತಿಗೆ ನೀಡುವ ತೆರದಿ ತನ್ನ ಕೆಲಸವನ್ನದು ಅವುಗಳ ಮೂಲಕ ಮಾಡಿಸಿಕೊಳ್ಳುತ್ತದೆ.ಇದಕ್ಕೆ ನೀಡಬೇಕಾದ ಶುಲ್ಕ ಪಾವತಿಸಲು ತನ್ನದೇ ಆದ ಮಾದರಿಯನ್ನು ಅನುಸರಿಸಲಿದೆ.ಸದ್ಯ ಸಿಂಪಲ್ ತಾಣದ ಸದಸ್ಯತ್ವವು ಆಮಂತ್ರಣದ ಮೂಲಕ ಮಾತ್ರಾ ಲಭ್ಯ. ಆಮಂತ್ರಣಕ್ಕಾಗಿ ಯಾರು ಬೇಕಾದರೂ ಕೋರಿಕೆ ಸಲ್ಲಿಸಬಹುದು. https://www.simple.com

ಅಂತರ್ಜಾಲ ಶೋಧ ತಾಣ

 
infoaxe.com ಇನ್ನೊಂದು ಶೋಧ ತಾಣ. ಆದರಿದು ಕೆಲಸ ಮಾಡುವ ರೀತಿ ಮಾತ್ರ ತುಸು ಭಿನ್ನ.ಶೋಧ ಗುಚ್ಚವನ್ನು ನೀಡಿದ ವ್ಯಕ್ತಿಯು ಈ ಹಿಂದೆ ಭೇಟಿ ನೀಡಿದ್ದ ತಾಣಗಳಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯಿದೆಯೇ ಎಂದು ಹುಡುಕಿಕೊಡಲು ಈ ತಾಣ ಪ್ರಯತ್ನಿಸುತ್ತದೆ. ಸಾಮಾನ್ಯವಾಗಿ ಜನರು ತಾವು ಹಿಂದೆ ಭೇಟಿ ನೀಡಿದ ತಾಣದಲ್ಲಿ ಕಂಡ ಯಾವುದೋ ಮಾಹಿತಿಯ ಬಗ್ಗೇ ಶೋಧಿಸುವುದೇ ಹೆಚ್ಚು ಎನ್ನುವ ಸಂಶೋಧನೆಯ ಅನ್ವಯ ಈ ತಾಣದ ಶೋಧವನ್ನು ನಡೆಸಲಾಗುತ್ತದೆ. ಈ ರೀತಿಯ ಶೊಧ ನಡೆಸುವ ಕಾರಣ, ತಾಣವು ನೋಂದಾವಣೆಯನ್ನು ಬಯಸುತ್ತದೆ. ಪ್ರತಿಯೋರ್ವನ ಅಂತರ್ಜಾಲ ಚರಿತೆಯನ್ನದು ನೆನಪಿನಲ್ಲಿರಿಸಿ, ಶೋಧ ಫಲಿತಾಂಶ ನೀಡುತ್ತದೆ. ಹೀಗಾಗಿ ಖಾಸಗಿತನದ ಬಗ್ಗೆ ಕಾಳಜಿ ಇದ್ದವರು ಈ ತಾಣವನ್ನು ದೂರವಿಡಲೂ ಬಹುದು.